ಹೊಸಪೇಟೆ:ಜು.09: ನಗರದಲ್ಲಿರುವ 60ಕ್ಕೂ ಹೆಚ್ಚು ಕೊಳೆಗೇರಿಗಳಿಗೆ ಕುಡಿವ ನೀರು ಸಮರ್ಪಕವಾಗಿ ಪೂರೈಸುವಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರಸಭೆ ಕಛೇರಿ ಎದುರು ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಹಾಗೂ ಕೊಳೆಗೇರಿ ನಿವಾಸಿಗಳು ಪತ್ರಿಭಟನೆ ನಡೆಸಿದರು.
ಸಮಿತಿ ಮುಖಂಡ ಸ್ಲಂ ರಾಮಚಂದ್ರ ಮಾತನಾಡಿ, ತುಂಗಭದ್ರಾ ಜಲಾಶಯ ಹತ್ತಿರದಲ್ಲಿದ್ದರೂ ನಗರದ ಕೊಳೆಗೇರಿಗಳಲ್ಲಿ ಕುಡಿವ ನೀರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೆ, ಕನಿಷ್ಠ ಮೂಲಸೌಲಭ್ಯವೂ ಇಲ್ಲವಾಗಿದ್ದು, ಅಲ್ಲಿನ ಜನರು ಸಂಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಕೊಳೆಗೇರಿಗಳತ್ತ ಸುಳಿಯದಿರುವುದು ಈ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಎಲ್ಲ ಕೊಳೆಗೇರಿಗಳಿಗೆ ಬೀದಿದೀಪ ಅಳವಡಿಕೆ, ಒಳ ಮತ್ತು ಹೊರ ಚರಂಡಿಗಳ ಸ್ವಚ್ಛತೆ, ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸುವುದು ಸೇರಿದಂತೆ ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು.
ಏಳು ದಿನದೊಳಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.