ಬೆಂಗಳೂರು, ಜು.15 : ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸದ್ಯ ದೇಶದಾದ್ಯಂತ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿದ್ದ ರಾಜಕಾರಣ ಸುಪ್ರೀಂ ಬಾಗಿಲು ತಟ್ಟಿತ್ತು. ಇಷ್ಟಾದರೂ ದೋಸ್ತಿ ನಾಯಕರು ಮಾತ್ರ ಅತೃಪ್ತ ನಾಯಕರ ಮನವೊಲಿಸಿ ಮರಳಿ ಕರೆತರಲು ವಿಫಲಗೊಂಡಿದ್ದರು. ಸಿಎಂ ಕುಮಾರಸ್ವಾಮಿ ವಿಶ್ವಾಸ ಮಂಡನೆಯ ದಾಳವೆಸೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಈ ಎಲ್ಲಾ ಹೈಡ್ರಾಮಾದಿಂದ ಬೇಸತ್ತ ಜೆಡಿಎಸ್ ಸಿದ್ದರಾಮಯ್ಯ ಎದುರು ಮಂಡಿಯೂರಿದೆ.
ಎರಡು ವಾರದ ಹಿಂದೆ ತೃಪ್ತರ ರಾಜೀನಾಮೆಯಿಂದ ಆರಂಭವಾದ ರಾಜಕೀಯ ಪ್ರಹಸನ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಸದ್ಯ ಎಲ್ಲಾ ಪ್ರಯತ್ನವನ್ನು ಮಾಡಿ ಸೋತ ಜೆಡಿಎಸ್ ‘ಅಣ್ಣಾ.. ಸರ್ಕಾರ ಉಳಿಸಿಕೊಡಿ’ ಎನ್ನುವ ಮೂಲಕ ಅತೃಪ್ತರ ಮನವೊಲಿಸುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದೆ.
ಇನ್ನು ಇಂದು ಸೋಮವಾರ ಬೆಳಗ್ಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರೆಸುವುದು ಬೇಡ. ಒಂದು ವೇಳೆ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಮುಂದುವರೆಸಿದರೂ ಅದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಖಚಿತ. ಹೀಗಾಗಿ ಬೆಂಬಲ ಹಿಂಪಡೆದು ವಿಪಕ್ಷದಲ್ಲಿ ಕುಳಿತುಕೊಂಡು ಕಾರ್ಯ ನಿರ್ವಹಿಸೋಣ ಎಂದು ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಕೂಡಾ ಈ ಮನವಿಗೆ ಸೈ ಎಂದು ಈ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.