ಹುಳಿಯಾರು: ಕೆಲಸ ಎಷ್ಟಾದ್ರೂ ಕೇಳಿ, ಶಕ್ತಿ ಮೀರಿ ಮಾಡ್ತೀನಿ.. ಆದರೆ, ಹಣಕೇಳೋಕೆ ನನ್ನ ಹತ್ತಿರ ಅವಕಾಶ ಇಲ್ಲಾ. ಇದೊಂದೇ ಕಾರಣಕ್ಕೆ ಕೆಲವರು ನನ್ನ ಬೈಕೊಂಡ್ ಓಡಾಡುತ್ತಾರೆ. ಹೀಗಂತ ಹೇಳಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಿಡ್ಲೆಕೋಣ ಗ್ರಾಮದಲ್ಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು.
ಸಚಿವರು ನಾನು ಯಾರ ಜೇಬಿಗೂ ಕೈ ಇಟ್ಟವನಲ್ಲ. ಅಡ್ಡದಾರಿ ಹಿಡಿದು ದುಡ್ದು ಮಾಡಿ ರಾಜಕಾರಣ ಮಾಡೋ ಜಾಯಮಾನ ನನ್ನದಲ್ಲ. ಇದೇ ಸಿದ್ಧಾಂತ ಮೈಗೂಡಿಸಿಕೊಂಡು ೩೦ ವರ್ಷ ರಾಜಕಾರಣದಲ್ಲಿ ಹೆಜ್ಜೆ ಸವೆಸಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಎಂದೆಂದಿಗೂ ಹೀಗೆಯೇ ಮುಂದುವರಿಯಲಿ. ಮತ ನೀಡಿ ಚುನಾಯಿಸಿದ ನಿಮ್ಮ ಋಣವನ್ನ ಪ್ರಾಮಾಣಿಕವಾಗಿಯೇ ತೀರಿಸುವೆ ಎಂದು ಭಾವುಕರಾಗಿ ನುಡಿದರು.
ಯಾವುದೇ ನೀರಾವರಿ ಯೋಜನೆ ಕಾಣದ ಬುಕ್ಕಾಪಟ್ಟಣ ಹೋಬಳಿಗೆ ಭದ್ರಾಮೇಲ್ದಂಡೆ ಯೋಜನೆಯಡಿಯಲ್ಲಿ ನೀರು ಹರಿಸುವ ದೊಡ್ಡ ಸವಾಲು ನನ್ನ ಮುಂದೆ ಇತ್ತು. ಅದೃಷ್ಟವಶಾತ್ ನಮ್ಮ ಸರ್ಕಾರ ರಚನೆಯಾಗಿ ಮಂತ್ರಿಗಿರಿಯೂ ದೊರೆತ ಕಾರಣ ಈ ಹೋಬಳಿಯ ಬುಕ್ಕಾಪಟ್ಟಣ, ರಾಮಲಿಂಗಾಪುರ ಹಾಗೂ ದೊಡ್ಡಅಗ್ರಹಾರ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿಗೆ ಸೇರ್ಪಡೆ ಮಾಡುವಲ್ಲಿ ಯಶ ಕಂಡಿದ್ದೇನೆ ಎಂದರು.