ವಿಜಯಪುರ, ಅ. 18: ಈ ಊರಲ್ಲಿ ಪ್ರತಿನಿತ್ಯ ಸಾವಿರಾರು ಜನರು ಅನಾರೋಗ್ಯದಿಂದ ಬಳಲುತ್ತಿದ್ದರು ಕೂಡ ಈ ಊರಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾತ್ರಾ ಯಾವಾಗಲೂ ಬೀಗ ಜಡಿದಿರುತ್ತದೆ. ಹೌದು, ಅನಾರೋಗ್ಯದಿಂದ ಬಂದ ರೋಗಿಗಳ ಪರದಾಟ ಕೇಳುವವರಿಲ್ಲ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ ಇದು. ವೈದ್ಯರು ಹಾಗೂ ನರ್ಸ್ಗಳ ಬೇಜವಾಬ್ದಾರಿತನಕ್ಕೆ ಗರ್ಭಿಣಿ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಆಸ್ಪತ್ರೆಯ ದುಸ್ಥಿತಿಗೆ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರುವುದೇ ಅಪರೂಪ. ಯಾವಾಗಲೂ ಬೀಗ ಜಡಿದಿರುತ್ತಾರೆ. ಇಂದು ಹೆರಿಗೆ ನೋವೆಂದು ಬಂದ ಗರ್ಭಿಣಿ ಆಸ್ಪತ್ರೆಯ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ್ದಾರೆ. ಸುನಂದಾ ಹೂಗಾರ ಹೆರಿಗೆ ನೋವೆಂದು ಬಳಗಾನೂರ ಆಸ್ಪತ್ರೆಗೆ ಬಂದಿದ್ದರು. ಆದರೆ ಅಲ್ಲಿ ಯಾವುದೇ ಸಿಬ್ಬಂದಿ ಅಥವಾ ವೈದ್ಯರಿರಲಿಲ್ಲ. ಜೊತೆಗೆ ಆಸ್ಪತ್ರೆಗೆ ಬೀಗ ಹಾಕಲಾಗಿತ್ತು.
ಸುನಂದಾಗೆ ಹೆರಿಗೆ ನೋವು ಜಾಸ್ತಿಯಾಗಿ ಒದ್ದಾಡುತ್ತಿದ್ದರು. ಮತ್ತೊಂದು ಆಸ್ಪತ್ರೆಗೆ ಹೋಗಲು ಹೆಚ್ಚು ಸಮಯ ಬೇಕಿತ್ತು. ಆಗ ಅಲ್ಲಿಯೇ ಇದ್ದ ಸ್ಥಳೀಯ ಮಹಿಳೆಯರು ಬೇರೆ ದಾರಿ ಕಾಣದೆ ತಕ್ಷಣ ಆಸ್ಪತ್ರೆಯ ಹೊರಗೆ ಹೆರಿಗೆ ಮಾಡಿಸಿದ್ದಾರೆ. ಸದ್ಯ ಸುನಂದಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಘಟನೆ ಇಂದು ಬೆಳಗ್ಗೆ 7 ಗಂಟೆಯಲ್ಲಿ ನಡೆದಿದೆ. ಇಂತಹ ಪ್ರಕರಣಗಳು ನಡೆದಿರುವುದು ಇದೇ ಮೊದಲೇನಲ್ಲ. ಅಲ್ಲಿ ವೈದ್ಯರಿಲ್ಲದ ಕಾರಣ ನರ್ಸ್ಗಳೇ ಹೆರಿಗೆ ಮಾಡಿಸುತ್ತಾರೆ ಎನ್ನಲಾಗಿದೆ. ಈ ಪ್ರಕರಣ ಮೂರನೆಯದ್ದಾಗಿದೆ. ವೈದ್ಯರು ಬರುವುದೇ ಅಪರೂಪ. ಇಲ್ಲಿ ನರ್ಸ್ಗಳದ್ದೇ ಕಾರುಬಾರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಅವರೇ, ದಯವಿಟ್ಟು ಬಳಗಾನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಬೀಗ ತೆಗಿಸಿ. ಸೋಮಾರಿ ವೈದ್ಯರು, ನರ್ಸ್ಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಅಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.