ರಾಮನಗರ, ಸೆ. 22 : ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಆರೋಪದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತರಲ್ಲಿ ಒಬ್ಬೊಬ್ಬರನ್ನಾಗಿಯೇ ಕರೆಸಿ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಈಗ ಸಹೋದರ ಡಿ.ಕೆ.ಸುರೇಶ್ ಕಡೆಗೂ ತನ್ನ ತನಿಖೆ ದಿಕ್ಕು ತಿರುಗಿಸುವ ಸುಳಿವು ನೀಡಿದೆ. ಈಗಾಗಲೇ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ, ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವರ ವಿಚಾರಣೆ ನಡೆಸಿದ ಇ.ಡಿ. ತನಿಖೆಯ ಪ್ರತಿ ಹಂತದಲ್ಲೂ ಸಹೋದರನ ಜತೆ ದೆಹಲಿಯಲ್ಲಿ ಬಂಡೆಯಂತೆ ನಿಂತಿರುವ ಸಂಸದ ಡಿ.ಕೆ.ಸುರೇಶ್ರನ್ನೂ ಕೂರಿಸಿಕೊಂಡು ವಿಚಾರಣೆ ನಡೆಸುವ ಸಾಧ್ಯತೆಗಳೂ ದಟ್ಟವಾಗಿವೆ.
ಡಿ.ಕೆ.ಶಿವಕುಮಾರ್ ಸಂಕಷ್ಟಕ್ಕೆಲ್ಲ ದೆಹಲಿಯ ಫ್ಲ್ಯಾಟ್ಗಳಲ್ಲಿ ಸಿಕ್ಕ 8.5 ಕೋಟಿ ರು. ನಗದು ಪ್ರಕರಣವೇ ಮೂಲ. ಆ ಪ್ರಕರಣವನ್ನು ಮುಂದಿಟ್ಟುಕೊಂಡೇ ಅವರ ಆದಾಯ, ಹಣಕಾಸು ವ್ಯವಹಾರಗಳ ಮೂಲಗಳನ್ನು ಇ.ಡಿ. ಕೆದಕುತ್ತಾ ಹೋಗುತ್ತಿದೆ. ದೆಹಲಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ವಶ ಪಡಿಸಿಕೊಂಡಿರುವ ನಗದಲ್ಲಿ 21.38 ಲಕ್ಷ ರು. ತನ್ನದೇ ಎಂದು ಡಿ.ಕೆ.ಸುರೇಶ್ ಈಗಾಗಲೇ ಘೋಷಿಸಿಕೊಂಡಿದ್ದಾರೆ.