ಬೆಂಗಳೂರು ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಕಟಿಸಿರುವ ಕನಿಷ್ಠ ವರಮಾನ ಖಾತ್ರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಅರಣ್ಯ ಹಕ್ಕು ಕಾಯ್ದೆ, ಆರ್ಟಿಇ, ಆರ್ಟಿಐ, ಉದ್ಯೋಗ ಖಾತ್ರಿ, ಭೂ ಸ್ವಾಧೀನ ಪರಿಹಾರ ಕಾಯ್ದೆಯಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಕಾಂಗ್ರೆಸ್.
ಈ ಯೋಜನೆಗಳು ಜನ ಸಾಮಾನ್ಯರ ಪರವಾಗಿದ್ದು, ಶ್ರೀಮಂತ ವರ್ಗ ಅವುಗಳನ್ನು ವಿರೋಧಿಸಿದವು. ಬಿಜೆಪಿಯ ಆರ್ಥಿಕ ತಜ್ಞರು ಕೂಡ ಇವುಗಳನ್ನು ವಿರೋಧಿಸಿದರು ಎಂದರು.
ಕಾಂಗ್ರೆಸ್ ಜನಸಾಮಾನ್ಯರ ಪರವಾಗಿ ಯೋಜನೆಗಳನ್ನು ರೂಪಿಸಿದರೆ, ಬಿಜೆಪಿ ಶ್ರೀಮಂತರ ಪರವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಮೋದಿ ಅವರು ಶ್ರೀಮಂತರ 3.17 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು.
ಚೌಕಿದಾರ್ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರ ಐದು ವರ್ಷದ ಆಡಳಿತಾವಧಿಯಲ್ಲಿ ಒಂದೂ ಜನಪರ ಯೋಜನೆಗಳನ್ನೂ ಜಾರಿಗೆ ತಂದಿಲ್ಲ. ಕೇವಲ ಕಪಟತನದಿಂದ ನಡೆದುಕೊಂಡು ಸುಳ್ಳು ಹೇಳುತ್ತಲೇ ರಾಜಕಾರಣ ಮಾಡುತ್ತಿದ್ದಾರೆ ಎಂದು ದಿನೇಶ್ಗುಂಡೂರಾವ್ ಟೀಕಿಸಿದರು.