ಹಾಸನ, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಐಟಿ ದಾಳಿ ಮುಂದುವರೆದಿದ್ದು, ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರ ಮನೆ ದೇವರು ಈಶ್ವರ ದೇಗುಲದ ಅರ್ಚಕರ ಮನೆ ಹಾಗೂ ದೇಗುಲದ ಮೇಲೆ ದಾಳಿ ನಡೆಸಲಾಗಿದೆ. ಹಾಸನ ಜಿಲ್ಲೆ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿರುವ ಅರ್ಚಕ ಪ್ರಕಾಶ್ ಭಟ್ ಅವರ ಮನೆ ಹಾಗೂ ದೇಗುಲದ ಪ್ರಾಂಗಣವನ್ನು ನಾಲ್ವರಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಅರ್ಚಕರ ಮನೆಯಲ್ಲಿ ಹಣ ಇಟ್ಟಿರಬಹುದೆಂಬ ಶಂಕೆ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ ಶೋಧನೆ ವೇಳೆ ಐಟಿ ಆದಾಯ ಅಧಿಕಾರಿಗಳಿಗೆ ಯಾವುದೇ ಮಹತ್ವದ ಮಾಹಿತಿ ಲಭಿಸಿಲ್ಲವೆಂದು ಹೇಳಲಾಗಿದ್ದು, ಬರಿಗೈಯ್ಯಲ್ಲಿ ಅಧಿಕಾರಿಗಳು ಹಿಂದಿರುಗಿದ್ದಾರೆ.