ಬೆಂಗಳೂರು, ಜ. 10 : ಅಪಾರ್ಟ್ವೆುಂಟ್ಗಳಲ್ಲಿ ಫ್ಲ್ಯಾಟ್ ಖರೀದಿಸುವ ನೆಪದಲ್ಲಿ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಸಿ ವಿವಿಧ ಬ್ಯಾಂಕ್ಗಳಲ್ಲಿ 20 ಕೋಟಿ ರೂ. ಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರದ ಮಂಜುನಾಥ್ (34) ಹಾಗೂ ಕೆಂಗೇರಿ ದೊಡ್ಡಬೆಲೆ ನಿವಾಸಿ ರಂಗನಾಥ್ (37) ಬಂಧಿತರು. ಆರೋಪಿಗಳಿಂದ 2 ಐಷಾರಾಮಿ ಕಾರುಗಳು ಮತ್ತು ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ.
ನಿರ್ಮಾಣ ಹಂತದ ಅಪಾರ್ಟ್ವೆುಂಟ್ಗಳನ್ನು ಅಮಾಯಕರಿಗೆ ತೋರಿಸಿ ತಾವೇ ಮಾಲೀಕರೆಂದು ಹೇಳಿ ಗ್ರಾಹಕರಿಂದ ಕೆವೈಸಿ ದಾಖಲಾತಿಗಳನ್ನು ಆರೋಪಿಗಳು ಪಡೆಯುತ್ತಿದ್ದರು. ಬಳಿಕ ಬಿಲ್ಡರ್ಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಗ್ರಾಹಕರ ಹೆಸರಿನಲ್ಲಿ ಬ್ಯಾಂಕ್ಗಳಲ್ಲಿ ಸಾಲ ಪಡೆದು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು.
ಇತ್ತೀಚೆಗೆ ಮಿಲ್ಲರ್ಸ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್ಗೆ ಫ್ಲ್ಯಾಟ್ ಖರೀದಿಗೆ ಸಾಲ ಕೋರಿ ವ್ಯಾಪಾರಿ ರವಿಕುಮಾರ್ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಖದೀಮರ ವಂಚನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.