ಬೆಂಗಳೂರು, ಡಿ. 20: ಎಸ್ಸಿ-ಎಸ್ಟಿ ಮೀಸಲಾತಿ ಕಾಯ್ದೆ ಅನುಷ್ಠಾನದ ವಿಚಾರ ಸುಪ್ರೀಕೋರ್ಟ್ನಲ್ಲಿದ್ದರಿಂದ ಹಲವು ವರ್ಷಗಳಿಂದ ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನು ಮುಂಬಡ್ತಿ ಆಧಾರದ ಮೇಲೆ ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಡಿಜಿಪಿ ನೀಲಮಣಿ ಎನ್. ರಾಜು ಒಂದು ವಾರದ ಗಡುವು ಕೊಟ್ಟಿದ್ದಾರೆ.
ಮುಂಬಡ್ತಿ ವಿಚಾರವಾಗಿ ಹೈಕೋರ್ಟ್ನಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ಬಂದಿದೆ. ಡಿವೈಎಸ್ಪಿ, ಇನ್ಸ್ಪೆಕ್ಟರ್ ಪಿಎಸ್ಐ, ಎಎಸ್ಐ ಮತ್ತು ಎಚ್ಸಿ ಹುದ್ದೆಗಳಿಗೆ ಬಡ್ತಿ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿದೆ. ಮುಂದಿನ 1 ವಾರದ ಒಳಗಾಗಿ ಖಾಲಿ ಉಳಿದಿರುವ ಪಿಎಸ್ಐ, ಎಎಸ್ಐ, ಎಚ್ಸಿ ಹುದ್ದೆಗೆ ಅರ್ಹರನ್ನು ಬಡ್ತಿ ನೀಡಿ ನಿಯೋಜನೆ ಮಾಡುವಂತೆ ಆಯಾ ಘಟಕಗಳ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ.ಮುಂಬಡ್ತಿ ಪಟ್ಟಿಯನ್ನು ಪ್ರಧಾನ ಕಚೇರಿಯ ಇ-ಮೇಲ್ ಮುಖಾಂತರ ವರದಿ ಕಳುಹಿಸುವಂತೆ ಸೂಚನೆ ಕೊಟ್ಟಿದ್ದಾರೆ. ಇತ್ತೀಚೆಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್, 2 ತಿಂಗಳಲ್ಲಿ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಗಡುವು ಕೊಟ್ಟು ವಿಚಾರಣೆ ಮುಂದೂಡಿತ್ತು. ಉಪ ಚುನಾವಣೆ ಬಳಿಕ ಬಡ್ತಿ ಪ್ರಕ್ರಿಯೆ ನಡೆಸುವುದಾಗಿ ಆಯಾ ಘಟಕಗಳ ಮುಖ್ಯಸ್ಥರು ಸಮಜಾಯಿಷಿ ಕೊಟ್ಟಿದ್ದರು. ಈಗ ಚುನಾವಣೆ ಮುಗಿದಿದ್ದು, ಬಡ್ತಿ ಪ್ರಕ್ರಿಯೆ ಆರಂಭಿಸುವಂತೆ ಡಿಜಿಪಿ ಸೂಚಿಸಿದ್ದಾರೆ.