ಬೆಂಗಳೂರು, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ತಮ್ಮ ವಿರುದ್ಧದ 1800 ಕೋಟಿ ರೂ. ಹಣ ನೀಡಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ವೈಚಾರಿಕವಾಗಿ ದಿವಾಳಿಯಾಗಿದ್ದಾರೆ. ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಚರ್ಚಿಸಲು ಯಾವುದೇ ಅಭಿವೃದ್ಧಿ ಪರ ವಿಷಯಗಳಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿದೆ. ಇದರಿಂದ ಕಾಂಗ್ರೆಸ್ನ ನಾಯಕರುಗಳು ಹತಾಶರಾಗಿದ್ದಾರೆ. 2019 ರ ಚುನಾವಣೆಯ ಸೋಲು ತಮಗೆ ಕಟ್ಟಿಟ್ಟಬುತ್ತಿ ಅನ್ನುವುದು ಕಾಂಗ್ರೆಸ್ ನಾಯಕರಿಗೆ ಸ್ಪಷ್ಟವಾಗಿ ಅರಿವಾಗಿದೆ. ಕಾಂಗ್ರೆಸ್ನ ನಾಯಕರು ಚುನಾವಣೆಗೆ ಮೊದಲೇ ಸೋಲೋಪ್ಪಿಕೊಂಡಿದ್ದಾರೆ. ಈಗ ಪ್ರಸ್ತಾಪಿಸುತ್ತಿರುವ ಭ್ರಷ್ಟಾಚಾರ ಆರೋಪದ ಕುರಿತು ಈ ಹಿಂದೆಯೇ ವಿಚಾರಣೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಕಲಿ ಎಂದು ಸಾಬೀತಾಗಿದೆ ಎಂದು ಬಿಎಸ್ ವೈ ಹೇಳಿದ್ದಾರೆ.
ಹಿಂದೆಯೇ ಆದಾಯ ತೆರಿಗೆ ಇಲಾಖೆಯು ದಾಖಲೆಗಳನ್ನು ಮತ್ತು ನನ್ನ ಕೈ ಬರಹ ಹಾಗೂ ಸಹಿಯನ್ನು ಕೂಡಾ ತಪಾಸಣೆಗೆ ಒಳಪಡಿಸಿದೆ. ಅಂದು ಈ ದಾಖಲೆಗಳೆಲ್ಲ ನಕಲಿ ಎಂದು ಸಾಬೀತಾಗಿದೆ. ಕಾಂಗ್ರೆಸ್ನ ನಾಯಕರುಗಳು ದುರುದ್ದೇಶಪೂರಿತ ಅಪಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡುವುದರಲ್ಲಿ ನಿಸ್ಸೀಮರು. ರಾಜಕೀಯವಾಗಿ ಲಾಭ ಪಡೆಯುವ ಉದ್ದೇಶ ಬಿಟ್ಟರೇ ಇದರ ಹಿಂದೆ ಯಾವುದೇ ವಾಸ್ತವಾಂಶ ಇಲ್ಲ. ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿರುವ ವಿಷಯಗಳು ಅಪ್ರಸ್ತುತ ಮತ್ತು ಸುಳ್ಳಿನ ಕಂತೆ. ಈ ವಿಷಯ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.