ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಕೌಟುಂಬಿಕ ಕಲಹ ವಿಚಾರ ಮತ್ತೆ ನ್ಯಾಯಾಲಯದ ಅಂಗಳಕ್ಕೆ ಬಂದಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶವಿದ್ದರೂ, ತನ್ನ ಪತ್ನಿಯನ್ನು ಮನೆಯೊಳಗೆ ಸೇರಿಸದಿರುವ ಬಗ್ಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಾನು ಆ ವಿಚಾರವನ್ನು ಕೋರ್ಟ್ನಲ್ಲಿಯೇ ಬಗೆಹರಿಸಿಕೊಳ್ಳುತ್ತೇನೆ. ಈ ವಿಚಾರದಲ್ಲಿ ನನ್ನ ಪತ್ನಿ ಕುಟುಂಬದವರು ಸ್ಪೀಕರ್ ರಮೇಶ್ ಕುಮಾರ್ ಬಳಿ ಹೋಗಲು ತೀರ್ಮಾನಿಸಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಹಿರಿಯರಿದ್ದಾರೆ. ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಎಂಎಲ್ಎ ಆದ ನಂತರ ಅವರ ಕುಟುಂಬದವರು, ನೀನು ನನ್ನ ಮಗನಿದ್ದಂತೆ ಎನ್ನುತ್ತಿದ್ದಾರೆ. ಆದ್ರೆ ಈ ಹಿಂದೆ ನಾನು ಸೋತಾಗ ಅತ್ತೆ ಪ್ರೇಮಕುಮಾರಿ ಅವರಿಗೆ ನೆನಪಾಗಿಲ್ವ ಎಂದು ಪ್ರಶ್ನೆ ಮಾಡಿದ್ದು ಕುಟುಂಬದ ಸಮಸ್ಯೆಯನ್ನು ನ್ಯಾಯಲಯದಲ್ಲಿಯೇ ಬಗೆಹರಿಸಿಕೊಳ್ಳುತ್ತೇನೆ ಎಂದೂ ಹೇಳಿದರು.
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರ ನಡುವೆ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿತ್ತು. 2016 ರಲ್ಲಿ ಈ ಘಟನೆ ನಡೆದಿತ್ತು. ಈ ಕುರಿತು ಪತ್ನಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಆಗ ಒಂದು ತಿಂಗಳೊಳಗೆ ಪತ್ನಿಯನ್ನು ಮನೆಗೆ ಸೇರಿಸಿಕೊಳ್ಳಬೇಕೆಂದು ಕೋರ್ಟ್ ತೀರ್ಪು ಸಹ ನೀಡಿತ್ತು.
ಕೋರ್ಟ್ ತೀರ್ಪು ನೀಡಿದ್ದರೂ ತನ್ನ ಪತ್ನಿಯನ್ನು ಶಾಸಕ ಎಂ.ಪಿ. ಕುಮಾರಸ್ವಾಮಿ ಮನೆಗೆ ಸೇರಿಸಿಕೊಂಡಿರಲಿಲ್ಲ. ಈ ಹಿನ್ನೆಲೆ ಪರಿಹಾರ ಕೋರಿ ಪತ್ನಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇನ್ನು ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಪತ್ನಿ ಮೈಸೂರಿನಲ್ಲಿ ಸರ್ಕಾರಿ ಹುದ್ದೆಯಲ್ಲಿದ್ದು ಅಲ್ಲಿಯೇ ವಾಸವಿದ್ದು ಕಾರ್ಯ ನಿರ್ವಹಿಸುತ್ತಿದ್ದಾರೆ.