ಕುಖ್ಯಾತ ರೌಡಿ ಸಹಚರನ ಕಾಲಿಗೆ ಪೊಲೀಸರ ಗುಂಡು

ಕುಖ್ಯಾತ ರೌಡಿ ಸಹಚರನ ಕಾಲಿಗೆ ಪೊಲೀಸರ ಗುಂಡು

ಬೆಂಗಳೂರು, ಅ. 26: ರಾಜ್ಯ ರಾಜಧಾನಿಯಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿಬಂದಿದೆ. ಕುಖ್ಯಾತ ರೌಡಿ ಯುವರಾಜ್ ಗ್ಯಾಂಗ್ ಸಹಚರ ಹರೀಶ್ ಕಾಲಿಗೆ ಗುಂಡು ಹಾರಿಸುವ ಮೂಲಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈತನ ವಿರುದ್ಧ ಪೀಣ್ಯ, ನಂದಿನಿ ಲೇಔಟ್, ರಾಜಗೋಪಾಲನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ, ಈತ ಇತ್ತೀಚೆಗೆ ದಾಸರಹಳ್ಳಿ ಬಳಿಯ ಅಂಗಡಿಯೊಂದನ್ನು ದರೋಡೆ ಮಾಡಿದ್ದ. ಹೀಗಾಗಿ ಈತನನ್ನು ಬಂಧಿಸಲು  ಪೊಲೀಸರು ಬಲೆ ಬೀಸಿದ್ದರು.

ಇಂದು ಬೆಳಗ್ಗೆ ಆರೋಪಿ ಹರೀಶ್ ಅಬ್ಬಿಗೆರೆ ಬಳಿ ಅಡಗಿರುವ ಕುರಿತ ಖಚಿತ ಮಾಹಿತಿ ಮೇರೆಗೆ ಪೀಣ್ಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುದ್ದುರಾಜ್ ತನ್ನ ತಂಡದೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಶರಣಾಗುವಂತೆ ಅವರು ಆರೋಪಿಗೆ ತಾಕೀತು ಮಾಡಿದರೂ ಕೇಳದ ಆರೋಪಿ ಹರೀಶ್ ಪೊಲೀಸ್ ಪೇದೆಗಳ ಮೇಲೆಯೇ  ಹಲ್ಲೆಗೆ ಮುಂದಾಗಿದ್ದಾನೆ. ಪರಿಣಾಮ ಪೇದೆಗಳಾದ ಲಕ್ಷ್ಮಿನಾರಾಯಣ ಮತ್ತು ಹರಿ ಎಂಬುವವರಿಗೆ ತೀವ್ರ ಗಾಯಗಳಾಗಿವೆ.

ಪೊಲೀಸ್ ಇನ್ಸ್ಪೆಕ್ಟರ್ ಮುದ್ದುರಾಜ್ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಬಳಿಕ ಗಾಯಾಳುಗಳಾದ ಪೇದೆಗಳು ಹಾಗೂ ಆರೋಪಿ ಹರೀಶ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos