ಬೆಂಗಳೂರು. ಆ, 1: ಬೆಂಗಳೂರು ನಗರದಲ್ಲಿ ಕನ್ನಡ ಚಿತ್ರರಂಗದ ಸಿನಿಮಾ, ಸೀರಿಯಲ್ ಕೆಲಸಗಳಿಗೆ ಕಂಠೀರವ ಸ್ಟುಡಿಯೋ ಕೇಂದ್ರ ಬಿಂದು ಎಂದರೂ ತಪ್ಪಾಗಲಾರದು. ಇಲ್ಲಿ ಅನೇಕ ಚಿತ್ರಗಳ ಮುಹೂರ್ತಗಳು ನೆರವೇರುತ್ತವೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ವರನಟ ರಾಜ್ಕುಮಾರ್, ನಿರ್ಮಾಪಕಿ ಪಾರ್ವತಮ್ಮ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಇಲ್ಲಿಯೇ ಮಣ್ಣು ಮಾಡಲಾಗಿದೆ. ಈಗ ಇದೇ ವಿಚಾರ ಸಿನಿಮಾ ಕೆಲಸಗಳಿಗೆ ಅಡ್ಡಿಯಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ!
ಹೌದು, ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಸಂಸ್ಕಾರ ಮಾಡಿದ ನಂತರದಲ್ಲಿ ಇಲ್ಲಿ ಸಿನಿಮಾ ಕೆಲಸಗಳು ಕಡಿಮೆ ಆಗಿವೆಯಂತೆ! ಹೀಗೆಂದು ಸ್ವತಃ ನಿರ್ಮಾಪಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ಅಂಬರೀಶ್ ಕಳೆದ ವರ್ಷ ಮೃತಪಟ್ಟಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ನಡೆದಿತ್ತು. ಸ್ಮಾರಕ ಕಟ್ಟುವ ಕೆಲಸಗಳಿಗೆ ಇನ್ನಷ್ಟೇ ಚಾಲನೆ ಸಿಗಬೇಕಿದೆ. ಹಾಗಾಗಿ, ಸಮಾಧಿ ಇದ್ದ ಕಡೆ ಶುಭ ಕಾರ್ಯ ಹೇಗೆ ಮಾಡುವುದು ಎಂಬ ನಂಬಿಕೆ ಇಟ್ಟುಕೊಂಡಿರುವ ಅನೇಕ ನಿರ್ಮಾಪಕರು ಇಲ್ಲಿ ಸಿನಿಮಾ ಮುಹೂರ್ತ ನಡೆಸಲು ಹಿಂದೇಟು ಹಾಕುತ್ತಿದ್ದಾರಂತೆ!
“ಈ ಸಮಸ್ಯೆ ಬಗ್ಗೆ ಮಾತನಾಡಿದರೆ ಅಂಬಿ ವಿರೋಧಿ ಪಟ್ಟ ಬರುವ ಭಯ ಕಾಡುತ್ತದೆ. ಆದರೆ, ಇಂಥ ಸ್ಥಳಗಳಲ್ಲಿ ಶುಭಕಾರ್ಯ ನಡೆಸುವುದು ಹೇಗೆ? ಒಂದೊಮ್ಮೆ ಸ್ಮಾರಕ ನಿರ್ಮಾಣ ಬೇಗ ಮುಗಿದರೆ ಸಮಸ್ಯೆ ಇರುವುದಿಲ್ಲ,” ಎನ್ನುತ್ತಾರೆ. ಕಂಠೀರವ ಸ್ಟುಡಿಯೋ ಸಿಬ್ಬಂದಿಗೆ ಸಿನಿಮಾ ಮುಹೂರ್ತಗಳೇ ಜೀವಾಳ. ಸಿನಿಮಾ ಮುಹೂರ್ತ ನಡೆದರೆ ಸ್ಟುಡಿಯೋಗೂ ಆದಾಯ. ಈಗ ಅಂಬಿ ಸಮಾಧಿಯಿಂದ ಅಶುಭ ಎಂಬ ವಿಚಿತ್ರ ನಂಬಿಕೆಯಿಂದ ಸ್ಟುಡಿಯೋಗೆ ನಷ್ಟವಾಗುತ್ತಿದೆ ಎಂಬುದು ಮೂಲಗಳ ಮಾತು.