ನಾಗಪುರ:
ಗಣರಾಜ್ಯೋತ್ಸವ ದಿನ ದೇಶಭಕ್ತಿ ಗೀತೆಯೊಂದಕ್ಕೆ ಮಕ್ಕಳು ನೃತ್ಯ ಮಾಡುವಾಗ ಅವರ ಮೇಲೆ ಹಣವನ್ನು ತೂರಿದ್ದ ಹೆಡ್ ಕಾನ್ಸ್ಟೆಬಲ್ನನ್ನು ಮಂಗಳವಾರ ಅಮಾನತು ಮಾಡಲಾಗಿದೆ.
ಪ್ರಮೋದ್ ವಾಲ್ಕೆ ಸೇವೆಯಿಂದ ಅಮಾನತುಗೊಂಡಿರುವ ಹೆಡ್ ಕಾನ್ಸ್ಟೆಬಲ್. ನಾಗಪುರದ ಭೀವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇಲ್ಲಿನ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿತ್ತು. ವೇದಿಕೆಯಲ್ಲಿ ಮಕ್ಕಳು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ವೇದಿಕೆಗೆ ಬಂದ ಪ್ರಮೋದ್ ವಾಲ್ಕೆ ಮಕ್ಕಳ ಮೇಲೆ ಹಣವನ್ನು ತೂರಿ ಸಂಭ್ರಮಿಸಿದ್ದರು. ಈ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರಿಕರಿಸಿದ್ದ ಕೆಲವರು ಅದನ್ನು ಸಾಮಾಜಿಕ ಜಾಳತಾಣಗಳಲ್ಲಿ ಹರಿಯ ಬಿಟ್ಟಿದ್ದರು.
ಪ್ರಮೋದ್ ವಾಲ್ಕೆ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರೇ ಇದು ಶಾಲಾ ಕಾರ್ಯಕ್ರಮ, ಬಾರ್ ಡ್ಯಾನ್ಸ್ ಅಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.
ಈ ಘಟನೆಯಿಂದ ಮುಜುಗರಕ್ಕೆ ಒಳಗಾಗಿದ್ದ ಮಹಾರಾಷ್ಟ್ರ ಪೊಲೀಸರು ಪ್ರಮೋದ್ ವಾಲ್ಕೆಯನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.