ಕಾಂಗ್ರೇಸ್ ಪಕ್ಷದಲ್ಲಿ ಮತ್ತೊಂದು ಅಸಮದಾನದ ಅಲೆ ಎದ್ದಿದೆ, ಸಚಿವರ ವಿರುದ್ಧ ಸ್ವಪಕ್ಷ ಕಾಂಗ್ರೆಸ್ ಶಾಸಕರು ಮತ್ತೆ ಅಸಮಾಧಾನ ಹೊರಹಾಕಲು ಆರಂಭಿಸಿದ್ದಾರೆ. ಶಾಸಕರು ದೂರವಾಣಿ ಮೂಲಕ ಕರೆ ಮಾಡಿದರೂ ಸಚಿವರು ಕರೆ ಸ್ವೀಕರಿಸುತ್ತಿಲ್ಲ. ಸಚಿವರ ಪಿಎಗಳು ಕೂಡ ಅದೇ ದಾರಿ ಹಿಡಿದಿದ್ದಾರೆ ಎಂದು ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಅವರು ಬಹಿರಂಗವಾಗಿ ಆಕ್ರೋಶಬರಿತವಾಗಿ ಹೇಳಿದರು.
ಶಾಸಕರೇ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ, ಕೆಲವು ಸಚಿವರು ಶಾಸಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಕೆಲವು ಶಾಸಕರು ಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದರು. ಇದು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಹೀಗಾಗಿ ಸಚಿವರು ಮತ್ತು ಶಾಸಕರ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಸಭೆ ನಡೆಸಿದ್ದರು. ಆದರೂ ಕೆಲವು ಸಚಿವರು ಇನ್ನೂ ಸುಧಾರಿಸಿಲ್ಲ ಎಂಬುದು ಶಿವಗಂಗಾ ಅವರ ಆರೋಪವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಸಭೆ ಮಾಡಿದ್ದರೂ ಕೂಡ ಯಾಕೆ ಕೆಲವು ಸಚಿವರು ಸುಧಾರಿಸಿಲ್ಲ, ಸಚಿವರಿಗೆ 135 ಕ್ಷೇತ್ರದ ಶಾಸಕರ ಪೋನ್ ನಂಬರ್ ಸೇವ್ ಮಾಡಿಕೊಳ್ಳುವಷ್ಟು ಅವರ ಮೊಬೈಲ್ ನಲ್ಲಿ ಮೆಮೊರಿ ಇರೋದಿಲ್ವಾ ಅಥವಾ ಉದ್ದೇಶ ಪೂರ್ವಕವಾಗಿ ಸ್ವೀಕರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೇಸ್ ಶಾಸಕ ಶಿವಗಂಗಾ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಅಣ್ಣಇದ್ದಹಾಗೆ. ಅವರ ಮೇಲೆ ಯಾವುದೇ ಬೇಸರ, ಮುನಿಸು ಇಲ್ಲ. ಉಸ್ತುವಾರಿ ಸಚಿವರು ಪೋನ್ ರಿಸೀವ್ ಮಾಡುತ್ತಾರೆ. ನಮ್ಮ ಸಚಿವರ ವಿರುದ್ಧ ನನ್ನ ದೂರು ಇಲ್ಲ, ಬೇರೆ ಸಚಿವರು ಹಾಗೇ ಮಾಡುತ್ತಾರೆ. ಇನ್ನು ಸ್ವಲ್ಪ ದಿನ ಕಾದು ನೋಡುತ್ತೇನೆ, ಅಮೇಲೆ ನಿಮ್ಮ ಮುಂದೆ ಬರುತ್ತೇನೆ ಸುದ್ದಿಗಾರರ ಮುಂದೆ ಬೇಸರ ವ್ಯಕ್ತ ಪಡಿಸಿದರು.
ವರದಿಗಾರ
ಅ.ಚಿದಾನಂದ,ವಿಜಯನಗರ.