ಫರೀದಾಬಾದ್, ಜೂ. 27: ಇಂದು ಬೆಳಗ್ಗೆ ಹರಿಯಾಣದ ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿಯನ್ನು (38 )ದೆಹಲಿ ಸಮೀಪದ ಫರೀದಾಬಾದ್ ನಲ್ಲಿ ಅಪರಿಚಿತರು ಗುಂಡಿಟ್ಟು ಕೊಂದಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಪ್ರಕಾರ, ಜಿಮ್ ನಿಂದ ಹೊರಬಂದ ಚೌಧರಿ ಅವರ ಮೇಲೆ ದಾಳಿ ನಡೆದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ.
ಮಾರುತಿ ಸುಜುಕಿ SX4 ಕಾರಿನಲ್ಲಿ ಬಂದ 4 ಜನ ದುಷ್ಕರ್ಮಿಗಳು ಕಾಂಗ್ರೆಸ್ ನಾಯಕ ಚೌಧರಿ ಅವರ ಮೇಲೆ 10 ಗುಂಡುಗಳನ್ನು ಹಾರಿಸಿದ್ದಾರೆ. ಸೆಕ್ಟರ್ 9 ಫರೀದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.