ಬೆಂಗಳೂರು, ಸೆ. 24: ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣಾ ಅಖಾಡ ಸಜ್ಜುಗೊಂಡಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸಿದ್ಧತೆ ಮಾಡಿಕೊಳ್ಳಲಾರಂಭಿಸಿವೆ.
ಹೊಸಕೋಟೆಯಿಂದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೂ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭೇಟಿ ಮಾಡಿದ ಎಂಟಿಬಿ ನಾಗರಾಜ್ ನಾಳೆಯ ಅರ್ಜಿ ವಿಚಾರಣೆ ಹಾಗೂ ಉಪ ಚುನಾವಣೆ ಟಿಕೇಟ್ ಕುರಿತು ಚರ್ಚೆ ನಡೆಸಿದ್ದಾರೆ. ಒಂದು ವೇಳೆ ತೀರ್ಪು ತಮ್ಮ ಪರವಾಗಿ ಬಂದರೆ ತನಗೆ ಟಿಕೆಟ್ ನೀಡಬೇಕು, ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡದಿದ್ದರೆ ತಾನು ಸೂಚಿಸಿದ ವ್ಯಕ್ತಿಗೆ ಟಿಕೇಟ್ ಕೊಡಬೇಕು ಎಂದು ಎಂಟಿಬಿ ಬೇಡಿಕೆಯಿಟ್ಟಿದ್ದಾರೆ.
ಮತ್ತೊಂದು ಕಡೆ ಶರತ್ ಬಚ್ಚೇಗೌಡರಿಂದಲೂ ಭಾರೀ ಲಾಬಿ ನಡೆಯುತ್ತಿದ್ದು, ಬಿಜೆಪಿ ಸಂಸದರಾಗಿರುವ ಬಚ್ಚೇಗೌಡರು ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಂದುವೇಳೆ ತಮ್ಮ ಮಗನಿಗೆ ಟಿಕೆಟ್ ನೀಡದಿದ್ದರೆ ಆತ ಪಕ್ಷೇತರನಾಗಿ ಸ್ಪರ್ಧಿಸಲಿದ್ದಾನೆ. ಆತನ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಮಗ ಒಪ್ಪುತ್ತಿಲ್ಲ. ಹೀಗಾಗಿ, ಆತನಿಗೆ ಟಿಕೆಟ್ ನೀಡದೆ ಇದ್ದರೆ ಬಿಜೆಪಿಗೆ ಬರುವ ಮತಗಳು ವಿಭಜನೆಯಾಗುತ್ತದೆ. ಪಕ್ಷೇತರನಾಗಿ ಶರತ್ ಸ್ಪರ್ಧಿಸಿದರೆ ಅದಕ್ಕೆ ತಾನು ಹೊಣೆಯಲ್ಲ ಎಂದು ಸಂಸದ ಬಚ್ಚೇಗೌಡ ಸಿಎಂ ಯಡಿಯೂರಪ್ಪ ಬಳಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.