ಸಿಎಲ್‍ಪಿಗೆ ಗೈರಾದರೆ ವಿಪ್ ಜಾರಿ?

ಸಿಎಲ್‍ಪಿಗೆ ಗೈರಾದರೆ ವಿಪ್ ಜಾರಿ?

ಬೆಂಗಳೂರು:ಬಿಜೆಪಿಯ ಆಪರೇಷನ್ ಕಮಲ 3 ನೇ ಬಾರಿಯೂ ವಿಫಲಗೊಂಡಿದೆ. ಈ ಬಾರಿ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ದೋಸ್ತಿ ಪಡೆ ಯಶಸ್ವಿಯಾಗಿದೆ. ಆದರೂ ದೋಸ್ತಿಗಳಿಗೆ ಅತೃಪ್ತ ಶಾಸಕರ ಕುರಿತು ಇನ್ನೂ ಭಯ ಹೋಗಿಲ್ಲ. ಆದ್ದರಿಂದ ತಮ್ಮ ಶಾಸಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ‍್ಳಲು ಕಾಂಗ್ರೆಸ್‍ ಭಾರೀ ಮಾಸ್ಟರ್‍ ಪ್ಲ್ಯಾನ್ ಒಂದನ್ನು ರೂಪಿಸಿದೆ.

ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಲ್‍ಪಿ ಸಭೆಯನ್ನು ಇಂದು ಕರೆದಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಶಾಸಕರು ಭಾಗವಹಿಸುವುದು ಅವಶ್ಯವಿದ್ದು, ಗೈರು ಹಾಜರಿ ಹಾಕಿದವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ ಶುಕ್ರವಾರ ಸಂಜೆ 3.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಲ್‍ಪಿ ಸಭೆ ನಡೆಯಲಿದ್ದು, ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್‍ ಕರೆದಿರುವ ಸಿಎಲ್‍ಪಿ
ಮೀಟಿಂಗ್‍ಗೆ ಕಡ್ಡಾಯವಾಗಿ ಬರಬೇಕು. ಬರದೇ ಇದ್ದಲ್ಲಿ ವಿಪ್ ಜಾರಿಗೊಳಿಸುವ ಖಡಕ್‍
ಎಚ್ಚರಿಕೆಯನ್ನೂ ಅದು ನೀಡಿದೆ. ಈ ಮೂಲಕ ಕಾಂಗ್ರೆಸ್ ಸಿಎಲ್‍ಪಿ ಮೀಟಿಂಗ್ ಮೂಲಕ ಕಾಂಗ್ರೆಸ್ನ ಬಲ
ಪ್ರದರ್ಶನ ಮಾಡಲು ಮುಂದಾಗಿದೆ. ಇನ್ನೊಂದು ಕಡೆ ಬಿಜೆಪಿ ಸಿಎಲ್‍ಪಿ ಮೀಟಿಂಗ್‍ ಗೆ ಗೈರಾಗುವ
ಅತೃಪ್ತ ಶಾಸಕರಿಗೆ ಎದುರು ನೋಡುತ್ತಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ ಎಂದು ನಿಯಮ
ಹೇಳುತ್ತದೆ.

ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದಾಗಿದೆ.

1994ರ ರವಿನಾಯಕ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪಕ್ಷಾಂತರ, ವಿಪ್ ಉಲ್ಲಂಘನೆ ಮಾತ್ರವಲ್ಲದೇ ಶಾಸಕರ ನಡವಳಿಕೆಯನ್ನು ಸಹ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಂತಹ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ.

ಕ್ರಮ ಕೈಗೊಂಡ ಬಳಿಕ ಶಾಸಕರ ನಡೆ ಪಕ್ಷ ವಿರೋಧಿಯಾಗಿತ್ತು ಎಂದು ಹೇಳಲು ಪಕ್ಷ ಸಾಕ್ಷಾಧಾರವನ್ನು ನೀಡಿ ಆರೋಪವನ್ನು ಸಾಬೀತುಪಡಿಸಬೇಕಾಗುತ್ತದೆ. ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು, ಹಾಜರಾಗದೇ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಶಾಸಕರು ಹಾಜರಾಗಲಿಲ್ಲ. ಈ ಕಾರಣಕ್ಕೆ ಇದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ ಎನ್ನುವ ಅಂಶವನ್ನು ಮುಂದಿಟ್ಟು ಅತೃಪ್ತರ ವಿರುದ್ಧ ಕ್ರಮ ಜರುಗಿಸಬಹುದು ವಿಶ್ವಾಸದಲ್ಲಿ  ಕಾಂಗ್ರೆಸ್ ನಾಯಕರು ಇದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos