2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ಬಿರುಗಾಳಿ ಎಬ್ಬಿಸಿದ್ದರೆ, 2019ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಆರಂಭಿಸಿರುವ ‘ಮೈ ಭಿ ಚೌಕಿದಾರ್’ (ನಾನು ಕೂಡ ಕಾವಲುಗಾರ) ಚಳವಳಿ ಸುಂಟರಗಾಳಿ ಎಬ್ಬಿಸಿದೆ. ಮುಂದಿನ ತಿಂಗಳು ಏಪ್ರಿಲ್ 11ರಂದು ಲೋಕಸಭೆ ಚುನಾವಣೆ ಮತದಾನದ ಪರ್ವ ಆರಂಭವಾಗಲಿದ್ದು, ಮತ್ತೊಮ್ಮೆ ಜಯಭೇರಿ ಬಾರಿಸಲು ಭಾರತೀಯ ಜನತಾ ಪಕ್ಷ ಉತ್ಸಾಹದಿಂದ ಪ್ರಚಾರ ಆರಂಭಿಸಿದೆ. ಮತ್ತೆ 272 ಕನಿಷ್ಠ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ನರೇಂದ್ರ ಮೋದಿಯವರು ರಣಕಹಳೆಯೂದಿದ್ದಾರೆ. “ನಿಮ್ಮ ಚೌಕಿದಾರ (ಕಾವಲುಗಾರ) ಅತ್ಯಂತ ಸದೃಢವಾಗಿ ನಿಂತಿದ್ದಾನೆ ಮತ್ತು ದೇಶದ ಸೇವೆ ಮಾಡುತ್ತಿದ್ದಾನೆ. ಆದರೆ, ಈ ಅಭಿಯಾನದಲ್ಲಿ ನಾನು ಏಕಾಂಗಿಯಲ್ಲ. ಭ್ರಷ್ಟಾಚಾರದ ವಿರುದ್ಧ, ಕೊಳಕಿನ ವಿರುದ್ಧ, ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಪ್ರತಿಯೊಬ್ಬರೂ ಚೌಕಿದಾರರೇ. ದೇಶದ ಪ್ರಗತಿಯಾಗಿ ಕಷ್ಟಪಟ್ಟು ದುಡಿಯುತ್ತಿರುವ ಪ್ರತಿಯೊಬ್ಬರೂ ಚೌಕಿದಾರರೇ. ಇಂದು ಪ್ರತಿ ಭಾರತೀಯ ಹೇಳುತ್ತಿದ್ದಾನೆ #MainBhiChowkidar” ಎಂದು ಅವರು ಮಾಡಿರುವ ಟ್ವೀಟ್ ದೇಶದಾದ್ಯಂತ ಅಕ್ಷರಶಃ ಉತ್ಸಾಹ ಮತ್ತು ಆಕ್ರೋಶದ ಕಿಡಿಯನ್ನೆಬ್ಬಿಸಿದೆ. ಲೋಕ ಕದನಕ್ಕೆ ಮೋದಿ ರೆಡಿ… ಎಲ್ಲೆಲ್ಲೂ ‘ಚೌಕಿದಾರಂದೇ’ ಹವಾ! ಬಿಜೆಪಿ ಬೆಂಬಲಿಗರು, ಸಂಸದರು ‘ನಾನು ಕೂಡ ಕಾವಲುಗಾರ’ ಅಭಿಯಾನವನ್ನು ಹೆಮ್ಮೆಯಿಂದ ಪ್ರಚಾರ ಮಾಡುತ್ತಿದ್ದರೆ, ವಿರೋಧಿಗಳ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ. #MainBhiChowkidar ಇಂದು ಟಾಪ್ ಟ್ರೆಂಡಿಂಗ್ ನಲ್ಲಿದ್ದು, ಹಲವಾರು ಟ್ವಿಟ್ಟಿಗರು ತಮ್ಮ ಟ್ವಿಟ್ಟರ್ ಖಾತೆಯನ್ನೇ ಬದಲಿಸಿ, ತಮ್ಮ ಖಾತೆಯ ಹೆಸರಿನ ಹಿಂದೆ ‘ಚೌಕಿದಾರ್’ ಎಂದು ಸೇರಿಸಿ, ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.