ಕಲಬುರ್ಗಿ, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ಉಪಚುನಾವಣೆಯಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರವು ಗೆಲ್ಲಲು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ರಣತಂತ್ರ ರೂಪಿಸಿದ್ದಾರೆ. ದೆಹಲಿ ಪ್ರವಾಸವನ್ನು ದಿಢೀರ್ ರದ್ದು ಮಾಡಿ ಕಲಬುರಗಿಯಲ್ಲೇ ಖರ್ಗೆ ವಾಸ್ತವ್ಯ ಹೂಡಿದ್ದಾರೆ. ಯಾವುದೇ ಕಾರಣಕ್ಕೂ ಚಿಂಚೋಳಿಯಲ್ಲಿ ಬಿಜೆಪಿ ಗೆಲ್ಲಬಾರದೆಂದು ಪ್ಲ್ಯಾನ್ ನಡೆಸಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಚಿಂಚೋಳಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.
ಬೈಎಲೆಕ್ಷನ್ ಬರಲು ಡಾ.ಉಮೇಶ್ ಜಾಧವ್ ಕಾರಣ ಅಂತಾ ಬಿಂಬಿಸುವುದು ಹಾಗೂ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದು ಸೇರಿದಂತೆ ಹಲವು ಜವಾಬ್ದಾರಿಗಳ ಕುರಿತಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಖರ್ಗೆ ಚರ್ಚೆ ನಡೆಸುತ್ತಿದ್ದಾರೆ. ಜೊತೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಮುಖ ಕಾರ್ಯಕರ್ತರ ಜೊತೆ ಖರ್ಗೆ ಸಭೆ ನಡೆಸಿದ್ದರು.