ಬೆಂಗಳೂರು: ಮಕ್ಕಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ. ಮಕ್ಕಳ ಮುದ್ದು ಮುಕ ಹಾಗೂ ಅವರ ನಗು ನೋಡಿದರೆ ಎಂತವರು ಸಹ ಮರುಳಾಗದೇ ಇರುವವರಲ್ಲಾ. ಮಕ್ಕಳಲ್ಲಿ ದೇವರು ನೆಲೆಸಿರುತ್ತಾನೆ ಎಂಬ ಮಾತು ಸಹ ಕೇಳಿದ್ದೇವೆ. ಆದರೆ ಇಲ್ಲೊಬ್ಬ ತಂದೆ ಕ್ರೂರತನ ಮೆರೆದಿದ್ದಾನೆ. ಮಗಳಿಗೆ ಬೆರಗುವ ಮೂಡಿಸುವ ಜಾದೂಗಾರನಾಗಿ ಇರಬೇಕಾದ ಅಪ್ಪನೊಬ್ಬ ಕ್ರೂರಿಯಾದ ಸುದ್ದಿ ಇದು. ಮಗು ಮಲಗುವಾಗ ಅಳುತ್ತೆ ಎಂಬ ಕಾರಣಕ್ಕೆ ಪಾಪಿ ತಂದೆ ಗೋಡೆಗೆ ಎಸೆದು ಬೀಸಾಕಿದ್ದಾನೆ. ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಒಂದು ವರ್ಷದ ಹೆಣ್ಣು ಮಗು ಸಾವು ಬದುಕಿನ ಮಧ್ಯೆ ಹೋರಾಡಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಶಂಬುಲಿಂಗಯ್ಯ ಶಾಪುರಮಠ ಎಂಬಾತ ಪಾಪಿ ತಂದೆಯಾಗಿದ್ದಾನೆ. ಕಳೆದ ರಾತ್ರಿ ಮಗು ಅಳುತ್ತಿತ್ತು. ಅಳುವ ಮಗುವಿಗೆ ಸಮಾಧಾನ ಪಡಿಸುವ ಬದಲಿಗೆ ಮಗುವಿನ ಕಾಲು ಹಿಡಿದು ಗೋಡೆಗೆ ಎಸೆದಿದ್ದಾನೆ.
ಗೋಡೆಗೆ ರಭಸವಾಗಿ ಎಸೆದ ಪರಿಣಾಮ ಮಗುವಿನ ತಲೆಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಮಗುವಿನ ತಾಯಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು. ಆದರೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಸದ್ಯ ಕುಟುಂಬಸ್ಥರಿಂದ ಗರಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ತಂದೆ ಶಂಬುಲಿಂಗಯ್ಯನನ್ನು ಬಂಧಿಸಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯನ್ನ ನಡೆದ ಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.