ಬೆಂಗಳೂರು, ಅ. 5: ಸಾಮಾನ್ಯವಾಗಿ ಯಾದೇ ಉತ್ಪನ್ನದ ಮೇಲೆ ಮಾರಾಟಗಾರರ ಪ್ರಾಬಲ್ಯ ಹೆಚ್ಚಿರುತ್ತದೆ. ಆದರೆ, ನಗರದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಾತ್ರ ಈಗ ಖರೀದಿದಾರರು ಪ್ರಾಬಲ್ಯ ಹೊಂದಿದ್ದಾರೆ. ಅಷ್ಟರಮಟ್ಟಿಗೆ ಈ ಮಾರುಕಟ್ಟೆ ಹೂಡಿಕೆಗೆ ಪೂರಕವಾಗಿದೆ.
ನಿವೇಶನ ಅಥವಾ ಪ್ಲಾಟ್ಗಳ ಬೇಡಿಕೆಗಿಂತ ಲಭ್ಯತೆ ಪ್ರಮಾಣ ಅಧಿಕವಾಗಿದೆ. ಹಾಗಾಗಿ, ಖರೀದಿದಾರರ ಮುಂದೆ ಹೆಚ್ಚು ಆಯ್ಕೆಗಳಿವೆ. ಮತ್ತೂಂದೆಡೆ ಬ್ಯಾಂಕುಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ಪ್ರಮಾಣ ಇಳಿಕೆ ಮಾಡಲಾಗಿದೆ. ಗಿದರಿಂದಾಗಿ ಗ್ರಾಹಕರಿಗೆ ಪರೋಕ್ಷವಾಗಿ ಲಾಭದಾಯಕ ಆಗಲಿದೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆಗೆ ಈಗ ಸಕಾಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆಯನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಿದೆ. ಇದರ ಲಾಭ ಸಹಜವಾಗಿ ಅಲ್ಲಿನ ಉದ್ಯೋಗಿಗಳಿಗೆ ವಿವಿಧ ರೂಪದಲ್ಲಿ ವರ್ಗಾವಣೆ ಆಗುತ್ತದೆ.
ದೇಶದ ಉಳಿದ ಮಹಾನಗರಗಳಿಗೆ ಹೋಲಿಸಿದರೆ, ರಿಯಲ್ ಎಸ್ಟೇಟ್ ವ್ಯಾಪಾರ ಬೆಂಗಳೂರಿನಲ್ಲಿ ಭಿನ್ನ. ಇಲ್ಲಿ ಅಭಿವೃದ್ಧಿಯಲ್ಲಿ ಸುಸ್ಥಿರತೆ ಇದೆ. ಬೇಕಾಬಿಟ್ಟಿ ನಿರ್ಮಾಣ ಮಾಡಿ, ನಂತರ ಖಾಲಿ ಇಟ್ಟುಕೊಂಡು ಬನ್ನಿ ದಯವಿಟ್ಟು ಖರೀದಿಸಿ ಎಂದು ದುಂಬಾಲು ಬೀಳುವುದಿಲ್ಲ. ಇದೇ ಕಾರಣಕ್ಕೆ ಇವತ್ತಿಗೂ ಇಲ್ಲಿನ ಭೂಮಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.
ಪ್ರತಿ ವರ್ಷ ರಿಯಲ್ ಎಸ್ಟೇಟ್ ವೃದ್ಧಿ ದರ ಸರಾಸರಿ ಶೇ.10 ರಷ್ಟಿದೆ. ದೇಶದಲ್ಲಿ ಇಷ್ಟೊಂದು ವೃದ್ಧಿ ಇರುವುದು ಬೆಂಗಳೂರಿನಲ್ಲಿ ಮಾತ್ರ. ಬ್ಯಾಂಕ್ಗಳಲ್ಲಿ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.8.5 ರಿಂದ ಶೇ.6.5ಕ್ಕೆ ಇಳಿಸಲಾಗಿದೆ. ಕ್ಷೇತ್ರದ ವೃದ್ಧಿ ದರಕ್ಕೆ ಹೋಲಿಸಿದರೆ, ಗ್ರಾಹಕರ ಪಾಲಿಗೆ ರಿಯಲ್ ಎಸ್ಟೇಟ್ ಲಾಭದಾಯಕ ಎಂದೂ ಪ್ರತಿಪಾದಿಸುತ್ತಾರೆ.
ಹೆಚ್ಚು ಆಯ್ಕೆಗಳು
ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಪ್ರಸ್ತುತ ಖರೀದಿದಾರರ ಪ್ರಾಬಲ್ಯ ಇದೆ. ಈ ಹಿಂದೆ ಯಾವುದಾದರೂ ಒಂದು ಸೈಟ್ ಅಥವಾ ಫ್ಲ್ಯಾಟ್ ನೋಡಿ ಬಂದು, ನಂತರ ಮೂರು ದಿನಬಿಟ್ಟು ಪುನಃ ಆ ಜಾಗಕ್ಕೆ ಭೇಟಿ ನೀಡಿದರೆ, ಅದರ ಬೆಲೆ ಹೆಚ್ಚಿಗೆ ಹೇಳುತ್ತಿದ್ದರು. ಆದರೆ, ಈಗ ಆ ಸ್ಥಿತಿ ಇಲ್ಲ. ಜನರ ಮುಂದೆ ಆಯ್ಕೆಗಳಿವೆ. ಕೈಗೆಟಕುವ ದರದಲ್ಲಿ ದೊರೆಯಲಿದೆ.
ನಗರದಾದ್ಯಂತ ಸುಮಾರು ಏಳು ಲಕ್ಷಕ್ಕೂ ಅಧಿಕ ಪ್ಲಾಟ್ಗಳು ಇದ್ದು, ಈ ಪೈಕಿ ಐಟಿಪಿಎಲ್ ಸುತ್ತಲಿನ ಪ್ರದೇಶದಲ್ಲೇ ಮೂರೂವರೆಯಿಂದ ನಾಲ್ಕು ಲಕ್ಷ ಇವೆ. ಹಾಗಂತ ಅವುಗಳ ದರ ಕಡಿಮೆ ಆಗಿಲ್ಲ. ಏಕೆಂದರೆ, ರಿಯಲ್ ಎಸ್ಟೇಟ್ ಪ್ರತಿ ವರ್ಷ ಪ್ರಗತಿ ಸಾಧಿಸುವ ಕ್ಷೇತ್ರವಾಗಿದೆ. ಹಲವು ಆಫರ್ ಗಳನ್ನು ಕೇಂದ್ರ ಸರ್ಕಾರ ನೀಡಿರುವುದರಿಂದ ಹೂಡಿಕೆಗೆ ಇದು ಉತ್ತಮ ಅವಕಾ±.À
ಎಸ್. ಶಿವಪ್ರಕಾಶ್, ಬಿಲ್ಡರ್ಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ಕೇಂದ್ರದ ಅಧ್ಯಕ್ಷ
ಪ್ರಸ್ತುತ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂಬ ಅಪಸ್ವರಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೈಗೆಟಕುವ ದರದಲ್ಲಿ ಸಿಗುವ ಫ್ಲ್ಯಾಟ್ ಗಳತ್ತ ಜನ ಮುಖಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಆ ಹೂಡಿಕೆದಾರರಿಗೆ ವರವಾಗುವ ನಿರೀಕ್ಷೆಯೂ ಇದೆ. ಸುರೇಶ್ ಹರಿ ಭಾರತೀಯ ರಿಯಲ್ ಎಸ್ಟೇಟ್ ಡೆವೆಲಪರ್ ಸಂಘಗಳ ಒಕ್ಕೂಟ (ಕ್ರೆಡಾಯ್) ಅಧ್ಯಕ್ಷ
ಬೆಂಗಳೂರು ಗಟ್ಟಿ ಮಾರ್ಕೆಟ್
ದೇಶದ ಇತರೆ ನಗರಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿದರೂ, ಬೆಂಗಳೂರು ಅಷ್ಟೊಂದು ಸುಲಭವಾಗಿ ಜಗ್ಗುವುದಿಲ್ಲ. ಎಂಥ ಸಂದರ್ಭಗಳಲ್ಲೂ ತನ್ನ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಇದಕ್ಕೆ ಮುಖ್ಯ ಕಾರಣ ಐಟಿ ಮತ್ತು ಸ್ಟಾರ್ಟಪ್ ವಲಯ. ಇತರೆ ಉದ್ಯಮಗಳ ಹಾಗೆ ಇವುಗಳಿಗೆ ಅಷ್ಟೊಂದು ಬೇಗ ದುಷ್ಪರಿಣಾಮ ಬೀರದು. ಬೆಂಗಳೂರು ಬಹುತೇಕ ಈ ಉದ್ಯಮದ ನೆರಳಲ್ಲೇ ಇದೆ.