ಬೆಂಗಳೂರು, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಬಳಸಿಕೊಂಡು, ನಿವೇಶನ ಕೊಡಿಸುವುದಾಗಿ ಹೇಳಿ ಜೆಡಿಎಸ್ ಮುಖಂಡರಿಬ್ಬರು 2 ಕೋಟಿ ರೂ. ವಂಚಿಸಿದ್ದಾರೆಂದು ಆರೋಪಿಸಲಾಗಿದೆ. ಜೆಡಿಎಸ್ ಮುಖಂಡರಾದ ಸತೀಶ್ ಗೌಡ ಮತ್ತು ಸುರೇಶ್ ವಂಚನೆ ಆರೋಪಿಗಳು. ಸುಬ್ರಮಣ್ಯನಗರ ಜೆಡಿಎಸ್ನ ಮುಖಂಡನಾಗಿರುವ ಸತೀಶ್ ಗೌಡ, 5 ಲಕ್ಷ ರೂ.ಗೆ 30/40 ಚದರಡಿ ನಿವೇಶನ ಕೊಡುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಈ ಮಾತನ್ನು ನಂಬಿದ 100ಕ್ಕೂ ಹೆಚ್ಚು ಜನರು ಸತೀಶ್ ಗೌಡನಿಗೆ 5 ಲಕ್ಷ ರೂ. ಕೊಟ್ಟಿದ್ದರು ಎಂದು ಹೇಳಲಾಗಿದೆ. ಹಣ ಪಡೆದ ಸತೀಶ್ಗೌಡ ಮತ್ತಿತರರು ಲಗ್ಗರೆ, ವಿಜಯನಗರ, ನಾಗರಬಾವಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ದಾಖಲಿ ಸೃಷ್ಟಿಸಿ ನಿವೇಶನಗಳನ್ನು ನೋಂದಣಿ ಮಾಡಿಸಿಕೊಟ್ಟಿದ್ದರು. ನಿವೇಶನ ಖರೀದಿಸಿದವರು ತಮ್ಮ ನಿವೇಶನಗಳ ಪಾಣಿ ತೆಗೆದುಕೊಳ್ಳಲು ಹೋದಾಗ, ಮೋಸ ಹೋಗಿರುವುದು ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನೊಂದವರು ಸುಬ್ರಹ್ಮಣ್ಯನಗರ ಮತ್ತು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.