ರಾಯಚೂರು, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದುವರಿದರೆ ರೈತರು ಭಿಕ್ಷೆ ಬೇಡುವ ಸ್ಥಿತಿ ಬರಬಹುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಪ್ರಚಾರ ಎಲ್ಲೆಡೆ ಬರದಿಂದ ಸಾಗುತ್ತಿದೆ. ಆದ್ರೆ 2014ರ ಚುನಾವಣೆ ವೇಳೆ ಮೋದಿ ಅವರು ನೀಡಿದ ಭರವಸೆಗಳು ಈಡೇರಿಲ್ಲ. ಅದರಲ್ಲೂ ಕೃಷಿ ಕ್ಷೇತ್ರಕ್ಕೆ ಹಾಗೂ ರೈತರಿಗೆ ನೀಡಿದ ಆಶ್ವಾಸನೆಗಳು ಸಂಪೂರ್ಣ ವಿಫಲವಾಗಿದೆ. ರೈತರು ಬೆಳೆ ಮೇಲೆ ಹಾಕುವ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ಆದಾಯ ಬರುವಂತೆ ದರ ನಿಗಿದಿ ಮಾಡುವುದಾಗಿ ಮೋದಿ ಹೇಳಿದ್ದರು. ಆ ಯೋಜನೆಯನ್ನು ಕೂಡ ಅವರು ಜಾರಿಗೆ ತಂದಿಲ್ಲ. ಹೀಗಿರುವಾಗ ಮೋದಿ ಸರ್ಕಾರ ಮುಂದುವರಿದರೆ ರೈತರು ಕೃಷಿ ಬಿಟ್ಟು ಭಿಕ್ಷೆ ಬೇಡುವ ಸಂದರ್ಭ ಬರಬಹುದು ಎಂದು ಕಿಡಿಕಾರಿದರು. ಮೋದಿ ರೈತರಿಗಾಗಿ ಅನೇಕ ನೀರಾವರಿ ಯೊಜನೆಗೆ 50 ಸಾವಿರ ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದರು. ಆದ್ರೆ ಹಣ ಬಿಡುಗಡೆ ಮಾಡಿಲ್ಲ. ತೀವ್ರ ಬರಗಾಲ ಬಂದಾಗ ರೈತರ ನೆರವಿಗೆ ಮೋದಿ ಬಂದಿಲ್ಲ. ಮೋದಿ ರೈತರಿಗಾಗಿ ಯಾವುದೇ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಆದರಿಂದ ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕೆಂದು ರೈತ ಬಾಂದವರಿಗೆ ಕೆರೆ ನೀಡುತ್ತಿದ್ದೇನೆ ಎಂದು ಚಾಮರಸ ಪಾಟೀಲ್ ಹರಿಹಾಯ್ದರು.