ನವದೆಹಲಿ, ನ. 8 : ಬಿಜೆಪಿಯ ಭೀಷ್ಮ ಎಂದೇ ಹೆಸರಾಗಿರುವ, ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರು ಇಂದು 92ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಆಡ್ವಾಣಿ ಹುಟ್ಟಿದ್ದು, ಬೆಳೆದದ್ದು ಈಗಿನ ಪಾಕಿಸ್ತಾನದ ಕರಾಚಿಯಲ್ಲಿ. ತಂದೆ ಕಿಶನ್ಚಂದ್, ತಾಯಿ ಜ್ಯಾನಿದೇವಿ, ತಂಗಿ ಶೀಲಾ. 1947ರ ಭಾರತ ವಿಭಜನೆಗೆ ಮುಂಚೆ ಅವರ ಪೂರ್ವಿಕರು ಕರಾಚಿಯಲ್ಲೇ ನೆಲೆಸಿದ್ದರು. 1936-42ರವರೆಗೆ ಆರು ವರ್ಷ ಕರಾಚಿಯ ಸೇಂಟ್ ಪ್ಯಾಟ್ರಿಕ್ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸ. 1947ರಲ್ಲಿ ದೇಶ ವಿಭಜನೆಯಾದಾಗ ಕರಾಚಿಯಿಂದ ದೆಹಲಿಗೆ ಬಂದರು.
ತಮ್ಮ ಪ್ರಮುಖ ಸಿದ್ಧಾಂತಗಳಿಂದ ಎಂದೂ ವಿಮುಖರಾಗದ, ಯಾವುದೇ ರಾಜಿಗೊಳಗಾದ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಜನ್ಮದಿನ ಶುಭಾಶಯ ಕೋರಿದ್ದಾರೆನಾಗರಿಕರ ಸಬಲೀಕರಣಕ್ಕೆ ನಿಮ್ಮ ಅಸಾಧಾರಣ ಕೊಡುಗೆಯನ್ನು ಭಾರತವು ಗೌರವಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅನುಭವಿ ನಾಯಕ : ಲಾಲಕೃಷ್ಣ ಆಡ್ವಾಣಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಂಘಟನೆ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಅವರು, ಆರೆಸ್ಸೆಸ್ ಪ್ರೇರಣೆಯಿಂದಲೇ ರಾಜಕೀಯಕ್ಕೆ ಬಂದರು. ಸಾಮಾನ್ಯ ಕಚೇರಿ ಕಾರ್ಯದರ್ಶಿಯಿಂದ ದೇಶದ ಉಪಪ್ರಧಾನಿವರೆಗಿನ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವಿ ನಾಯಕ.
ರಾಜಕೀಯ ಪ್ರವೇಶ : 1957ರ ಹೊತ್ತಿಗೆ ಜನಸಂಘ ಸ್ವಲ್ಪಮಟ್ಟಿಗೆ ಪ್ರಭಾವ ಬೆಳೆಸಿಕೊಂಡಿತ್ತು. ಅಟಲ್ ಬಿಹಾರಿ ವಾಜಪೇಯಿ ಸೇರಿ ಕೆಲವರು ಸಂಸತ್ತಿಗೆ ಆಯ್ಕೆಯಾಗಿದ್ದರು. ಪಕ್ಷದ ಕಾರ್ಯಚಟುವಟಿಕೆಗಳು ಮತ್ತು ಸಂಸದೀಯ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಸಮರ್ಥ ಕಾರ್ಯಕರ್ತನ ಅಗತ್ಯ ದೆಹಲಿಯಲ್ಲಿತ್ತು. ಆಗ ಜನಸಂಘದ ಅಧ್ಯಕ್ಷರಾಗಿದ್ದ ಪಂಡಿತ್ ದೀನದಯಾಳ ಉಪಾಧ್ಯಾಯರಿಗೆ ಹೊಳೆದದ್ದು ಆಡ್ವಾಣಿ ಹೆಸರು. ಹೊಸ ಹೊಣೆಯೊಂದಿಗೆ ಆಡ್ವಾಣಿಯವರ ರಾಜಕೀಯ ಪ್ರವೇಶವೂ ಆಯಿತು.