ಚಾಮರಾಜನಗರ, ಡಿ. 13 : ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದೇವಾಲಯಕ್ಕೆ ಕನ್ನ ಹಾಕುವ ಖದೀಮರ ಕಾಟ ಹೆಚ್ಚಾಗಿದ್ದು, ಇಷ್ಟು ದಿನ ದೇವಾಲಯಗಳಲ್ಲಿ ಚಿನ್ನಾಭರಣ ದೋಚುತ್ತಿದ್ದ ಕಳ್ಳರು ಇದೀಗ ಸಿಸಿಟಿವಿ ಕ್ಯಾಮೆರಾವನ್ನೂ ಕಳವು ಮಾಡಿದ್ದಾರೆ.
ತಾಲೂಕಿನ ಸೋಮವಾರಪೇಟೆ ಬಳಿಯ ಶಿರಗಳ್ಳಿ ಲಕ್ಷ್ಮೀ ದೇವಿ ದೇವಾಲಯಕ್ಕೆ ಕನ್ನ ಹಾಕಿರುವ ಖದೀಮರು ಸಿಸಿಟಿವಿ ಕ್ಯಾಮೆರಾ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ಡಿವಿಆರ್ ಸಹ ಕಳವು ಮಾಡಿದ್ದಾರೆ. ದೇವಾಲಯಕ್ಕೆ ಕನ್ನ ಹಾಕಿದ ಬಳಿಕ ಸಮೀಪದಲ್ಲಿರುವ ಯೂನಿವರ್ಸಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲೂ ಕಳ್ಳತನ ಮಾಡಿದ್ದಾರೆ. ಶಾಲೆಯ ಬೀಗ ಮುರಿದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ.