ಹುಬ್ಬಳ್ಳಿ, ಅ. 26: ಅಧಿವೇಶನದಲ್ಲಿ ಮಾತನಾಡಲು ವಿಪಕ್ಷ ನಾಯಕರಿಗೆ ಸ್ಪೀಕರ್ ಅವಕಾಶ ಕೊಡಲಿಲ್ಲ. ಹೀಗಾಗಿ ಸಭಾಧ್ಯಕ್ಷರ ನಡೆಯನ್ನು ನಾನು ಖಂಡಿಸಿದ್ದೇನೆ. ಸಿಎಂ ಬಿ.ಎಸ್.ಯಡಿಯೂರಪ್ಪ ಹಕ್ಕುಚ್ಯುತಿ ಮಂಡಿಸಲಿ ಬಿಡಿ. ನಾನು ಯಡಿಯೂರಪ್ಪರಿಂದ ಪಾಠ ಕಲಿಯಬೇಕಿಲ್ಲ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ವೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಧಿವೇಶನದಲ್ಲಿ ಮಾತನಾಡಲು ಅವಕಾಶ ಕೊಡದ ಸ್ಪೀಕರ್ ನಡೆಗೆ ಖಂಡನೆ ವ್ಯಕ್ತಪಡಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಪ್ರತಿ ಮಾತಿಗೂ ಉತ್ತರಿಸಲು ನಮಗೆ ಕೆಲಸವಿಲ್ವಾ? ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದರು.
ಉಪಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಕ್ಷೇತ್ರದ ಅಭ್ಯರ್ಥಿಗಳನ್ನು ಫೈನಲ್ ಮಾಡುತ್ತಿದ್ದೇವೆ. ಬಿಜೆಪಿಯವರು ನಮ್ಮ ಶಾಸಕರನ್ನು ಕರೆದೊಯ್ದರು. ಶಾಸಕರನ್ನು ಕರೆದೊಯ್ದು ನಡು ನೀರಲ್ಲಿ ಕೈಬಿಟ್ಟಿದ್ದಾರೆ. ಸುಪ್ರೀಂ ತೀರ್ಪು ನೋಡಿ ನಿರ್ಧಾರ ಮಾಡುತ್ತೇವೆ ಎಂದರು.
ಸರ್ಕಾರ ಪ್ರವಾಹ ಪೀಡಿತರಿಗೆ ಪರಿಹಾರ ಕೊಟ್ಟಿಲ್ಲ. ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಬಹಳ ಜನ ಪರಿಹಾರ ಸಂತ್ರಸ್ತರ ಪಟ್ಟಿಯಿಂದ ಬಿಟ್ಟು ಹೋಗಿದ್ದಾರೆ. ತಾತ್ಕಾಲಿಕ ಶೆಡ್ಗಳನ್ನೂ ನಿರ್ಮಾಣ ಮಾಡಿಲ್ಲ. ಜನರು ಕಷ್ಟದಲ್ಲಿದ್ದಾರೆ, ಬಿಜೆಪಿಯವರು ಮೋಜು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.