ಭುವನೇಶ್ವರ: ಹುಟ್ಟುತ್ತಾ ಅಣ್ಣತಮ್ಮಂದಿಯರು; ಬೆಳೆಯುತ್ತಾ ದಾಯಾದಿಗಳು.ಸಹೋದರನನ್ನೊಬ್ಬನ ರುಂಡ ಕತ್ತರಿಸಿ ಅದನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ತಂದಿರುವ ಘಟನೆ ಒಡಿಶಾದ ಸಂಬಲ್ಪುರ್ ಜಿಲ್ಲೆಯಲ್ಲಿ ಐಂಠಾಪಾಲಿ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಟಿಲೈಮಾಲಾ ಗ್ರಾಮದಲ್ಲಿ ನಡೆದಿದೆ.
ಸತ್ಯನಾರಾಯಣ ಕೊಲೆಯಾದ ವ್ಯಕ್ತಿ. ಮೃತ ಸತ್ಯನಾರಾಯಣ ರಾತ್ರಿ ಮನೆಯ ವರಾಂಡದಲ್ಲಿ ಸೊಳ್ಳೆ ಪರದೆ ಕಟ್ಟಿಕೊಂಡು ಒಬ್ಬನೇ ಮಲಗಿದ್ದನು. ಈ ವೇಳೆ ಆರೋಪಿ ಉಜ್ಜಲ ಮುಂಡ ಬಂದು ಏಕಾಏಕಿ ಹರಿತವಾದ ಆಯುಧದಿಂದ ಸತ್ಯನಾರಾಯಣನ ಕತ್ತು ಕತ್ತರಿಸಿದ್ದಾನೆ. ಆರೋಪಿ ಪೊಲೀಸ್ ಠಾಣೆಗೆ ಹೋಗಿ ತಾನೂ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿದ್ದು, ಆತ ಕೊಲೆಗೆ ಬಳಸಿದ್ದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆಸ್ತಿ ವಿವಾದವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.