ಬೆಳಗಾವಿ, ನ. 10 : ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹಾಗೂ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ನಡುವೆ ತಿಕ್ಕಾಟ ತೀವ್ರಸ್ವರೂಪ ಪಡೆದುಕೊಂಡಿದ್ದು ಸಹೋದರನ ವಿರುದ್ಧ ಮತ್ತೆ ಸತೀಶ್ ವಾಗ್ದಾಳಿ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ದೆಹಲಿಯ ಕೆಲವು ಕಾಂಗ್ರೆಸ್ ಮುಖಂಡರ ಮೂಲಕ ದುರ್ಬಲ ಅಭ್ಯರ್ಥಿಗೆ ಗೋಕಾಕ್ನಲ್ಲಿ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಗೋಕಾಕ್ನಲ್ಲಿ ಲಖನ್ ಜಾರಕಿಹೊಳಿ ಸಮರ್ಥ ಅಭ್ಯರ್ಥಿ ಎಂದು ಟಿಕೆಟ್ ಕೊಡಲಾಗುತ್ತಿದೆ. ಹೊರಗಿನವರು ಚುನಾವಣೆ ಮಾಡುವುದು ಗೋಕಾಕ್ನಲ್ಲಿ ಬಹಳ ಕಷ್ಟ. ಅಶೋಕ ಪೂಜಾರಿ ಮೂರು ಬಾರಿ ಪ್ರಯತ್ನ ಮಾಡಿ ಸೋತಿದ್ದಾರೆ. ರಮೇಶ್ ಆ್ಯಂಡ್ ಟೀಮ್ ಲಖನ್ ಜಾರಕಿಹೊಳಿ ಬದಲಾಗಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.