ಬೆಂಗಳೂರು, ಡಿ. 26 : ವರ್ಷದ ಕೊನೆಯಲ್ಲಿ, ಅದೂ 9 ವರ್ಷಗಳ ಬಳಿಕ, ಸಂಭವಿಸುತ್ತಿರುವ ಅಪರೂಪದ, ಬಾನಂಗಣದ ಚಮತ್ಕಾರದ ನೆರಳು, ಬೆಳಕಿನ ಕಂಕಣ ಸೂರ್ಯಗ್ರಹಣವನ್ನು ನಾಡಿನ ಜನರು ಕಣ್ತುಂಬಿಕೊಂಡರು.
ಬೆಳಗ್ಗೆ 8.04ರಿಂದ ಸೂರ್ಯಗ್ರಹಣ ಆರಂಭವಾಗಿದೆ. ರಾಜ್ಯದೆಲ್ಲೆಡೆ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದರೂ ಕೆಲವು ಕಡೆ ಮೋಡ ಮುಸುಕಿದ ವಾತಾವರಣದ ಕಾರಣ ಸೂರ್ಯಗ್ರಹಣ ಅಸ್ಪಷ್ಟವಾಗಿ ಗೋಚರವಾಗಿದೆ.
ಬೆಂಗಳೂರಿನಲ್ಲಿ ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ. ಲಾಲ್ ಬಾಗಿನಲ್ಲಿ ವಾದ್ಯ ಬಾರಿಸುವ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಚಾಲನೆ ನೀಡಲಾಯಿತು. ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಹಾಗೂ ನಡಿಗೆದಾರರ ಒಕ್ಕೂಟದಿಂದ ಸೂರ್ಯಗ್ರಹಣ ವೀಕ್ಷಣೆಯನ್ನು ಆಯೋಜನೆ ಮಾಡಲಾಗಿದೆ. ಸೂರ್ಯಗ್ರಹಣದ ಕೌತುಕ ಕಣ್ತುಂಬಿಕೊಳ್ಳುವ ಕಾತರ ಹೆಚ್ಚಾಗಿತ್ತು.