ಬೆಂಗಳೂರು, ಡಿ. 17: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ವಿರುದ್ಧವಾಗಿ ಹೊಸದಾಗಿ ಹುಟ್ಟಿಕೊಂಡಿರುವ ಕರ್ನಾಟಕ ಬಾಕ್ಸಿಂಗ್ ಸಂಸ್ಥೆಯನ್ನು ಅನರ್ಹಗೊಳಿಸುವುದರ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಒಲಿಂಪಿಕ್ ಭವನ ಎದುರು ಬಾಕ್ಸಿಂಗ್ ಸಂಸ್ಥೆ ಪದಾಧಿಕಾರಿಗಳು, ಬಾಕ್ಸರ್ಗಳು ಪ್ರತಿಭಟನೆ ನಡೆಸಿದರು.
ಕಾರ್ಯದರ್ಶಿಯಾಗಿರುವ ಸಾಯಿ ಸತೀಶ್ ಅವರ ಬಂಡಾಯ ಬಾಕ್ಸಿಂಗ್ ಸಂಸ್ಥೆ ಡಿ. 16 ರಂದು ಚುನಾವಣೆ ನಡೆಸಿತು. ಇದು ಸರಿಯಾದ ಕ್ರಮವಲ್ಲ. ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ನಿಯಮದ ಪ್ರಕಾರ 2016ರಲ್ಲಿ ಚುನಾವಣೆ ನಡೆದಿತ್ತು. 4 ವರ್ಷಗಳ ಬಳಿಕ 2020ರಲ್ಲಿ ಚುನಾವಣೆ ನಡೆಯಬೇಕು. ಆದರೆ ಬಂಡಾಯ ಸಂಸ್ಥೆ ಆತುರವಾಗಿ ಚುನಾವಣೆ ನಡೆಸುತ್ತಿರುವುದಕ್ಕೆ ಕಾರಣ ಏನೆನ್ನುವುದು ತಿಳಿದಿಲ್ಲ ಎಂದು ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಕಾರ್ಯದರ್ಶಿ ರಾಜ್ಕುಮಾರ್ ಹೇಳಿದರು. ಕೆಒಎ ಸಹಿತ ಬಂಡಾಯ ಬಾಕ್ಸಿಂಗ್ ಸಂಸ್ಥೆಗೆ ಬೆಂಬಲ ನೀಡುತ್ತಿದ್ದು, ಇದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.