ಶ್ರೀನಗರ, ಜು.29: ಉಗ್ರರು ನಡೆಸಿದ ದಾಳಿಯಲ್ಲಿ 8 ಗುಂಡುಗಳು ಈ ಯೋಧನ ದೇಹ ಹೊಕ್ಕಿದ್ದವು. 2 ತಿಂಗಳಿಗೂ ಹೆಚ್ಚುಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬೆನ್ನುಮೂಳೆಗೆ ಗುಂಡೇಟು ಬಿದ್ದಿದ್ದರಿಂದ ಅವರು ನಡೆದಾಡುವುದೇ ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೂ ಚಮತ್ಕಾರದ ರೀತಿಯಲ್ಲಿ ಚೇತರಿಕೆ ಕಂಡ ಯೋಧ ಈಗ ಸೇವೆಗೆ ಮರಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಖುರ್ಷೀದ್ ಅಹಮದ್ ಸಿಆರ್ಪಿಎಫ್ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2016ರ ಜೂನ್ 25 ರಂದು ಶೂಟಿಂಗ್ ಅಭ್ಯಾಸ ಮುಗಿಸಿ ವಾಪಸ್ ಬರುತ್ತಿದ್ದ ಯೋಧರ ಮೇಲೆ ನಾಲ್ವರು ಉಗ್ರರು ಗುಂಡು ಹಾರಿಸಿದ್ದರು. ದಾಳಿಯಲ್ಲಿ 8 ಯೋಧರು ಹುತಾತ್ಮರಾಗಿದ್ದರು ಹಾಗೂ 22 ಯೋಧರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಖುರ್ಷೀದ್ ಅಹಮದ್ ದೇಹಕ್ಕೆ 8 ಗುಂಡುಗಳು ಹೊಕ್ಕಿದ್ದವು. ಆದರೂ ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದ ಇವರು ಉಗ್ರರೆಡೆಗೆ ನಿರಂತರವಾಗಿ ಗುಂಡು ಹಾರಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ದೆಹಲಿಯ ಏಮ್ಸ್ ಆಸ್ಪತ್ರೆಯ 2 ತಿಂಗಳು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದ ಅವರು ಚೇತರಿಸಿಕೊಂಡಿದ್ದು, ಸೇವೆಗೆ ಮರಳಿದ್ದಾರೆ. ಸಿಆರ್ಪಿಎಫ್ ಖರ್ಷೀದ್ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಚೇರಿ ಕೆಲಸವನ್ನು ನೀಡಿದೆ.