ಬೆಂಗಳೂರು: ಕೆಐಎಡಿಬಿ ಹಗರಣದಲ್ಲಿ ಜೈಲು ಸೇರಿ ಪಕ್ಷದ ಚಟುವಟಿಕೆಯಿಂದ ನಿಷ್ಕ್ರೀಯರಾಗಿದ್ದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಉನ್ನತ ಜವಾಬ್ದಾರಿ ನೀಡಲಾಗಿದೆ.
ಜೊತೆಗೆ ಒಬಿಸಿ ಮೋರ್ಚಾ ಉಸ್ತುವಾರಿ ಜವಾಬ್ದಾರಿಯನ್ನ ನಾಯ್ಡುಗೆ ವಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಜೈಲು ಸೇರಿದ ನಂತರ ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದ ನಾಯ್ಡುಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿತ್ತು. ಹಿಂದೆ ಹೆಬ್ಬಾಳ ಶಾಸಕರಾಗಿದ್ದ ಅವರನ್ನು ಈ ಬಾರಿ ಶಿವಾಜಿನಗರದಿಂದ ಕಣಕ್ಕಿಳಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ನಾಯ್ಡು ಯಡಿಯೂರಪ್ಪರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಜೈಲು ಸೇರಿದ ನಂತರ ನಿಷ್ಕ್ರೀಯಗೊಂಡಿದ್ದರು. ಈಗ ಮತ್ತೆ ನಾಯ್ಡುಗೆ ಉನ್ನತ ಜವಾಬ್ದಾರಿ ನೀಡುವ ಮೂಲಕ ಮತ್ತೆ ಅವರನ್ನು ರಾಜಕೀಯ ಮುನ್ನಲೆಗೆ ತಂದಿದ್ದಾರೆ.
ಇಬ್ಬರು ರಾಜ್ಯ ವಕ್ತಾರರ ನೇಮಕ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಮೋದ್ ಹೆಗಡೆ ಮತ್ತು ಬೆಳಗಾವಿಯ ಮಾರುತಿ ಜಿರಲಿ ಅವರನ್ನು ರಾಜ್ಯ ವಕ್ತಾರರನ್ನಾಗಿ ನೇಮಿಸಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.