ಬೆಂಗಳೂರು,ನ. 29 : ಉಪಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಬಾರದೆ ಇದ್ದರೆ ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮತ್ತೆ 2ನೇ ಹಂತದ ಆಪರೇಷನ್ ಕಮಲ ನಡೆಸಲು ಸಜ್ಜಾಗಿದೆ.
ಕಾಂಗ್ರೆಸ್-ಜೆಡಿಎಸ್ನಲ್ಲಿ ಅಸಮಾಧಾನಗೊಂಡಿರುವ ಶಾಸಕರನ್ನು ಈಗಾಗಲೇ ಸೆಳೆಯಲಾಗಿದ್ದು, ಡಿ.9ರಂದು ಪ್ರಕಟಗೊಳ್ಳಲಿರುವ ಫಲಿತಾಂಶದ ನಂತರ ನಡೆಯುವ ರಾಜಕೀಯ ಲೆಕ್ಕಾಚಾರದ ಬಳಿಕವೇ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ.
ಪ್ರಸ್ತುತ ವಿಧಾನಸಭೆಯಲ್ಲಿ 105 ಸದಸ್ಯರನ್ನು ಹೊಂದಿರುವ ಬಿಜೆಪಿ ಸರಳ ಬಹುಮತ ಪಡೆಯಲು ಇನ್ನು ಏಳು ಸದಸ್ಯರ ಬೆಂಬಲ ಬೇಕು. ಪಕ್ಷೇತರ ಶಾಸಕ ಮುಳಬಾಗಿಲಿನ ಎಚ್.ನಾಗೇಶ್ ಈಗಾಗಲೇ ಸಚಿವರಾಗಿದ್ದಾರೆ. ಕೊಳ್ಳೆಗಾಲ ಬಿಎಸ್ಪಿ ಶಾಸಕ ಎನ್.ಮಹೇಶ್ ಬಹಿರಂಗವಾಗಿ ಬಿಜೆಪಿಗೆ ಬೆಂಬಲ ಸೂಚಿಸಿಲ್ಲವಾದರೂ ಸಂದರ್ಭ ಬಂದರೆ ಬಿಜೆಪಿಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ.