ಹೈದ್ರಾಬಾದ್, ಜೂ. 20: ಪೊಲೀಸರಿಂದ ಥಳಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಬುಧವಾರ ತಡ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅವಂತಿ ಬಾಯಿ ಲೋಧ್ ಅವರ ಪ್ರತಿಮೆ ಪುನರ್ ಸ್ಥಾಪನೆಗಾಗಿ ಬೆಂಬಲಿಗರೊಂದಿಗೆ ತೆರಳಿದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಜುಮೀರತ್ ಬಜಾರ್ನಲ್ಲಿ 2009 ರಲ್ಲಿ ಮೂರ್ತಿ ಸ್ಥಾಪಿಸಲಾಗಿತ್ತು, ಆದರೆ 2 ಬಾರಿ ಹಾನಿಯಾದ ಹಿನ್ನಲೆಯಲ್ಲಿ ತೆರವುಗೊಳಿಸಲಾಗಿತ್ತು. ರಾಜಾ ಸಿಂಗ್ ಅವರು ಪ್ರತಿಮೆಯನ್ನು ಪುನರ್ ಸ್ಥಾಪಿಸಲು ತೆರಳಿದಾಗ ವಾಗ್ವಾದ ನಡೆದಿದ್ದು, ಈ ವೇಳೆ ಪೊಲೀಸರು ಲಾಠಿಯಿಂದ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.ಇಬ್ಬರು ಎಸಿಪಿಗಳು ಮತ್ತು ಇಬ್ಬರು ಎಸ್ಐಗಳು ರಾಜಾ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬೆಂಬಲಿಗರೊಬ್ಬರು ಹೇಳಿದ್ದಾರೆ. ತಲೆ ಭಾಗದಲ್ಲಿ ಗಂಭೀರ ಗಾಯವಾದ ಹಿನ್ನಲೆಯಲ್ಲಿ ರಾಜಾ ಸಿಂಗ್ ಅವರನ್ನು ಓಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.