ನವದೆಹಲಿ, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿಯವರೇ ಉದ್ಯೋಗ ಎಲ್ಲಿ ಸೃಷ್ಟಿಸಿದ್ದೀರಾ? ಎಂದು ಇಡೀ ದೇಶವೇ ಕೇಳುತ್ತಿದೆ. ಉದ್ಯೋಗ ಸೃಷ್ಟಿ ಬಗ್ಗೆ ಮೋದಿ ಬಳಿ ಯೋಜನೆಗಳೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ನಮ್ಮ ಸೇನೆ, ಮೋದಿ ಅಲ್ಲ. ಭಾರತೀಯ ಸೇನೆ 70 ವರ್ಷದಿಂದ ಸಧೃಡವಾಗಿದೆ. ಅದು ಮೋದಿಯವರ ವೈಯಕ್ತಿಕ ಆಸ್ತಿ ಅಲ್ಲ. ನಮ್ಮ ಸರ್ಕಾರದ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ಆಗಿತ್ತು. ಆದರೆ ನಾವು ಅದನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ ಎಂದು ಹೇಳಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ನಿಶ್ಚಿತ. ಈವರೆಗಿನ ಮತದಾನದಲ್ಲಿ ಬಿಜೆಪಿಗೆ ಯಾರು ಮತ ಹಾಕಿಲ್ಲ. ಭಾರತದ ಅರ್ಥವ್ಯವಸ್ಥೆಯನ್ನು ಅವರು ಬುಡಮೇಲು ಮಾಡಿದ್ದಾರೆ. ನ್ಯಾಯ ಯೋಜನೆ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರಲ್ಲ. ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ನಮ್ಮ ಸಾಧನೆ ಅಂತಿದ್ದಾರೆ. ಇದರಲ್ಲಿ ನರೇಂದ್ರ ಮೋದಿ ಸಾಧನೆ ಏನೆಂದು ಹೇಳಲಿ? ಎಂದು ರಾಹುಲ್ ಪ್ರಶ್ನಿಸಿದರು.