ಬೆಂಗಳೂರು, ಜು. 10 : ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಶಾಸಕ ರಹೀಂ ಖಾನ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗೆ ಕೊನೆಗೂ ತೆರೆ ಬಿದ್ದಿದೆ. “ಯುವಜನ ಮತ್ತು ಸೇವಾ ಇಲಾಖೆಗೆ ಹೆಚ್ಚಿನ ಅನುದಾನ ನೀಡದೆ ಹೋದಲ್ಲಿ, ನಾನು ಸಚಿವರಾಗಿ ಮುಂದುವರೆಯುವುದಿಲ್ಲ. ಬದಲಿಗೆ ರಾಜೀನಾಮೆ ನೀಡುತ್ತೇನೆ” ಎನ್ನುತ್ತಿದ್ದ ರಹೀಂ ಖಾನ್ ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಂಧ್ರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ 1600 ಕೋಟಿ ಅನುದಾನ ನೀಡಲಾಗಿದೆ. ನಮ್ಮಲ್ಲಿ ಕೇವಲ 6 ಕೋಟಿ ಅನುದಾನ ಮೀಸಲಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಅನುದಾನ ಹೆಚ್ಚಿಸಿ, ಇಲ್ಲದೇ ಹೋದಲ್ಲಿ ಸಚಿವನಾಗಿ ಮುಂದುವರೆಯೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದೇ ಎಂದರು.
ಹೆಚ್ಚು ಯುವಜನರನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಇಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಬೇಕಿದೆ. ಅದಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ನೀಡಬೇಕಿದೆ. ಹಲವು ಕಡೆ ಕ್ರೀಡಾಂಗಣ, ಈಜುಕೊಳಗಳ ನಿರ್ಮಾಣದ ಕೆಲಸ ಅರ್ಧಕ್ಕೆ ನಿಂತು ಹೋಗಿದೆ. ಹಾಗಾಗಿ ನನ್ನಿಂದ ಇಲಾಖೆಯಲ್ಲಿ ಅನುದಾನ ಇಲ್ಲದೇ, ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದೆ ಎಂದು ತಿಳಿಸಿದರು.