ನವದೆಹಲಿ, ಮಾ.5, ನ್ಯೂಸ್ ಎಕ್ಸ್ ಪ್ರೆಸ್: ಭಾರತದ ಮೇಲೆ ಸಮುದ್ರದ ಮೂಲಕ ಹಾಗೂ ವಿವಿಧ ರೀತಿಗಳಲ್ಲಿ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ವರದಿಗಳು ನಮಗೆ ದೊರಕಿದೆ ಎಂದು ನೌಕಾಪಡೆಯ ಚೀಫ್ ಅಡ್ಮಿರಲ್ ಸುನಿಲ್ ಲಂಬಾ ಇಂದು ಎಚ್ಚರಿಕೆ ನೀಡಿದ್ದಾರೆ.
26/11 ಮುಂಬೈ ದಾಳಿಯನ್ನು ಲಷ್ಕರ್-ಎ-ತೊಯ್ಬಾದ 10 ಮಂದಿ ಉಗ್ರರು ಸಮುದ್ರದ ಮೂಲಕ ಆಗಮಿಸಿ ಭಾರತೀಯ ಮೀನುಗಾರಿಕಾ ಟ್ರಾಲರ್ ಒಂದನ್ನು ಅಪಹರಿಸಿ ಮುಂಬೈ ತಲುಪಿ ನಡೆಸಿದ್ದನ್ನು ಇಲ್ಲಿ ನಾವೆಲ್ಲ ಸ್ಮರಿಬಹುದು.
ರಾಜಧಾನಿಯಲ್ಲಿ ಇಂಡೋ ಪೆಸಿಫಿಕ್ ರೀಜನಲ್ ಡೈಲಾಗ್ ನಲ್ಲಿ ಜಾಗತಿಕ ತಜ್ಞರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. “ಜಗತ್ತಿನ ಈ ಭಾಗವು ವಿವಿಧ ರೀತಿಯ ಉಗ್ರವಾದವನ್ನು ಇತ್ತೀಚಿಗಿನ ವರ್ಷಗಳಲ್ಲಿ ಸಾಕ್ಷಿಯಾಗಿದೆ. ಈ ಪ್ರಾಂತ್ಯದ ಕೆಲವೇ ಕೆಲವು ದೇಶಗಳು ಮಾತ್ರ ಈ ಸಮಸ್ಯೆಯಿಂದ ಹೊರತಾಗಿವೆ” ಎಂದು ಅವರು ಹೇಳಿದರು.
“ಒಂದು ದೇಶದ ಸರಕಾರ ಪ್ರವರ್ತಿತ ಉಗ್ರವಾದದಿಂದ ಭಾರತ ಬಹಳಷ್ಟು ಗಂಭೀರವಾದ ಬೆದರಿಕೆ ಎದುರಿಸುತ್ತಿದೆ” ಎಂದು ಹೇಳಿದ ನೌಕಾ ಪಡೆಯ ಮುಖ್ಯಸ್ಥ “ಇತ್ತಿಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಯು ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ದೇಶವೊಂದು ಬೆಂಬಲಿಸುತ್ತಿರುವ ಉಗ್ರರಿಂದ ನಡೆದಿದೆ” ಎಂದು ಪಾಕಿಸ್ತಾನವನ್ನು ಹೆಸರಿಸದೆಯೇ ಅವರು ಹೇಳಿದರು.
“ಒಂದು ನಿರ್ದಿಷ್ಟ ಬ್ರ್ಯಾಂಡ್ ನ ಉಗ್ರವಾದ ಮುಂದೆ ಜಾಗತಿಕ ಸಮಸ್ಯೆಯಾಗಬಹುದು, ಈ ಸಮಸ್ಯೆ ಪರಿಹಾರಕ್ಕೆ ಭಾರತದ ಭದ್ರತಾ ಪಡೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ,” ಎಂದರು.