ನವದೆಹಲಿ, ಆ. 11 : ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ವಿಚಾರ ಜಾಗತಿಕಮಟ್ಟದಲ್ಲಿ ಬೆಂಬಲಿಸಿ ವಿಫಲವಾಗಿರುವ ಪಾಕಿಸ್ತಾನ ನಿರಾಸೆಗೊಂಡು, ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ ತೀವ್ರಗೊಳಿಸಿದೆ. ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕೋಟ್ಲಿ, ರಾವಲ್ಕೋಟ್, ಬಾಘ್ ಮತ್ತು ಮುಜಾಫರಾಬಾದ್ನಲ್ಲಿರುವ ಉಗ್ರನೆಲೆಗಳ ಬಗ್ಗೆ ಗುಪ್ತಚರ ಇಲಾಖೆಯೂ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನ ಸೇನೆಯ ನೆರವಿನಿಂದಲೇ ಉಗ್ರರು ಇಲ್ಲಿಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಪಾಕಿಸ್ತಾನದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಇಮ್ರಾನ್ ಖಾನ್, ಭಾರತದಲ್ಲಿ ಪುಲ್ವಾಮಾ ಮಾದರಿಯ ದಾಳಿಗಳಾದರೆ ಇದಕ್ಕೆ ಪಾಕ್ ಜವಾಬ್ದಾರಿಯಲ್ಲ ಎಂದಿದ್ದರು. ಪಾಕ್ ಉಗ್ರ ಸಂಘಟನೆಗಳ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗಿದೆ. ಮೂಲಗಳ ಪ್ರಕಾರ ಪಾಕ್ ಸರ್ಕಾರದ ಸೂಚನೆ ಮೇರೆಗೆ ಜೈಷ್ ಎ ಮೊಹಮ್ಮದ್, ಲಷ್ಕರ್ ಎ ತೊಯ್ಬಾ ಮತ್ತು ಪಾಕ್ ಗುಪ್ತಚರ ಇಲಾಖೆ ಐಎಸ್ಐ ಜಂಟಿಯಾಗಿ ದಾಳಿ ಯೋಜನೆ ರೂಪಿಸುತ್ತಿವೆ.