ಬೆಂಗಳೂರು, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ನೆಲಮಂಗಲದ ದಾಬಸ್ ಪೇಟೆಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಮೊಯ್ಲಿ ಪ್ರಚಾರಕ್ಕೆ ಮೈತ್ರಿ ನಾಯಕರು ಸಾಥ್ ನೀಡಿದರು. ಪ್ರಚಾರಕ್ಕೂ ಮುನ್ನ ಬಾನವಾಡಿ ಗ್ರಾಮ ಪಂಚಾಯಿತಿಯ ಬಂಡೇಮಠದ ಬಸವಲಿಂಗ ಸ್ವಾಮೀಜಿ ಹಾಗೂ ಶಿವಗಂಗೆಯ ಶಿವಾಚಾರ್ಯ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆರು. ಪ್ರಚಾರದಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ, ಇತ್ತೀಚೆಗೆ ಲಿಂಗೈಕ್ಯರಾದ ಕರ್ನಾಟಕ ರತ್ನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲು ಕೇಂದ್ರದ ಎನ್ಡಿಎ ಸರ್ಕಾರ ಮನಸ್ಸು ಮಾಡಲಿಲ್ಲ. ಈ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರಿಗೆ ಭಾರತ ರತ್ನ ಗೌರವವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪುಲ್ವಾಮಾ ದಾಳಿಗೆ ಕಾರಣವೇನು, ಸಿಆರ್ಪಿಎಫ್ ಯೋಧರಲ್ಲಿ ಶಸ್ತ್ರಾಸ್ತ್ರ ಇರದೆ ಇದ್ದದ್ದೂ ಯಾಕೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಪುಲ್ವಾಮ ದಾಳಿಯ ನಂತರ ಬಾಲಾಕೋಟ್ ಪ್ರದೇಶದಲ್ಲಿ ಮಾಡಿದ ದಾಳಿಯಲ್ಲಿ ಉಗ್ರರ ಒಂದು ಹೆಣವೂ ಬಿದ್ದಿಲ್ಲ ಎಂದು ಬಿಬಿಸಿ ಸುದ್ದಿವಾಹಿನಿ ಹೇಳಿದೆ. ಆದರೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್, 300 ಉಗ್ರರು ಸತ್ತಿದ್ದಾರೆ ಎಂದು ಹೇಳುತ್ತಾರೆ ಎಂದರೆ ನಾವು ಆಲೋಚಿಸಬೇಕು ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ. ಹಿಂದೆ ಗರಿಭಿ ಹಠಾವೋ ಮಾದರಿಯಲ್ಲಿ ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿಯವರು 25 ಕೋಟಿ ಬಡ ಕುಟುಂಬಕ್ಕೆ ವರ್ಷಕ್ಕೆ 72 ಸಾವಿರ ರೂ. ನೀಡುವ ಭರವಸೆ ನೀಡಿದ್ದಾರೆ. ಎನ್ಡಿಎ ಸರ್ಕಾರ ಜಾರಿ ತಂದಿರುವ ಜಿಎಸ್ಟಿ ತೆರಿಗೆ ಹಲವು ದೋಷಗಳ ಜತೆಗೆ ವಿವಿಧ ಹಂತಗಳಲ್ಲಿ ಇದೆ. ಅದನ್ನು ನಾವು ಸರಳೀಕರಣಗೊಳಿಸುವ ಕೆಲಸ ಮಾಡುತ್ತೇವೆ ಎಂದರು.