ಬಿ.ಎಸ್.ವೈ-ಶೋಭಾ ಮಾಟ, ಮಂತ್ರ: ಬೇಳೂರು ಗೋಪಾಲಕೃಷ್ಣ

ಬಿ.ಎಸ್.ವೈ-ಶೋಭಾ ಮಾಟ, ಮಂತ್ರ: ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ನನಗೆ ವಾಮಾಚಾರ ಮಾಡಿಸಿರಬೇಕು. ಹಾಗಾಗಿಯೇ ಕಳೆದ ಎರಡು ತಿಂಗಳಿಂದ ಮಂಕಾಗಿದ್ದೇನೆ. ಆದರೆ, ಈ ಮಾಟ-ಮಂತ್ರ ತೆಗೆಸಲು ನಾನು ಎಲ್ಲಿಗೂ ಹೋಗಿಲ್ಲ. ಕೇವಲ ದೇವಾಲಯಕ್ಕೆ ಹೋಗಿ ನಮಸ್ಕರಿಸಿದ್ದೇನೆ ಎನ್ನುವ ಮೂಲಕ ಕಾಂಗ್ರೆಸ್ ಮುಖಂಡ​​ ಬೇಳೂರು ಗೋಪಾಲಕೃಷ್ಣ ಭಾವುಕರಾಗಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಶಿವಮೊಗ್ಗಕ್ಕೆ ಬಂದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್​​ನಲ್ಲಿ ಯಾವುದೇ ರೀತಿಯ ಸಣ್ಣ ಗೊಂದಲವೂ ಇಲ್ಲ. ಪಕ್ಷ ಮತ್ತು ಹೈಕಮಾಂಡ್ ಆದೇಶಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಬಿಜೆಪಿಯಿಂದ ನಾವು ಹಿಂದುತ್ವದ ಪಾಠ ಕಲಿಯಬೇಕಿಲ್ಲ. ನಾವೂ ಕೂಡ ಹಿಂದುಗಳೇ. ಯಡಿಯೂರಪ್ಪ ಅವರು, ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ದುರಂತ. ಅಡ್ವಾಣಿ ಅವರು ಮೂಲೆಗುಂಪಾದಂತೆಯೇ ಬಿಎಸ್​​​ವೈ ಕೂಡ ಆಗಲಿದ್ದಾರೆ ನೋಡಿ ಎಂದು ಬಿಜೆಪಿ ಮೇಲೆಯೇ ಬೇಳೂರು ಗಂಭೀರ ಆರೋಪ ಎಸಗಿದ್ಧಾರೆ. ಸದಾನಂದ ಗೌಡರೇ ಚುನಾವಣೆ ಬಳಿಕ ಯಡಿಯೂರಪ್ಪ ಅಧ್ಯಕ್ಷರಾಗಿ ಇರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಿಖಿಲ್ ಕುಮಾರ್ ಸ್ವಾಮಿ ಆಸ್ತಿ 80 ಕೋಟಿ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಬಿಜೆಪಿ ಶಿವಮೊಗ್ಗ ಅಭ್ಯರ್ಥಿ ಬಿ.ವೈ ರಾಘವೇಂದ್ರ ಆಸ್ತಿ ಕಳೆದ ಐದು ತಿಂಗಳಿನಲ್ಲಿ 12 ಕೋಟಿ ಹೆಚ್ಚಾಗಿದೆ. ಈ ಆದಾಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ಹೀಗೆ ಮಾತು ಮುಂದುವರೆಸಿದ ಬೇಳೂರು, ಯೋಗಿ ಆದಿತ್ಯನಾಥ್ ದೇಶದ ಸೈನ್ಯವನ್ನು ಮೋದಿ ಸೈನ್ಯ ಎಂದಿರುವುದು ಸೈನಿಕರಿಗೆ ಮಾಡಿದ ಅವಮಾನ. ಸೈನಿಕರು ದೇಶದ ಆಸ್ತಿ. ಅವರನ್ನು ಚುನಾವಣೆ ಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ದುರಂತ. ಯಡಿಯೂರಪ್ಪ ಹಾಗೂ ಶೋಭಾಕರಂದ್ಲಾಜೆ ಬಳಿ ಹಣ ಇಲ್ಲವೇ. ಅವರ ಮೇಲೆ ಕೂಡ ಐಟಿ ದಾಳಿ ನಡೆಸಿ ಎಂದು ಕುಟುಕಿದರು. ಬಿ.ಎಸ್​​ ಯಡಿಯೂರಪ್ಪ ಕುಟುಂಬಕ್ಕೆ ಸಂಬಂಧಿಸಿದ ಸಿ.ಡಿ ಹರತಾಳು ಹಾಲಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಪಿಎ ಬಳಿ ಇದೆ. ಇದೇ ಕಾರಣದಿಂದಲೇ ಕಳೆದ ಬಾರಿ ರಾಘವೇಂದ್ರ ಹಾಗೂ ವಿಜಯೇಂದ್ರ ಅವರಿಗೆ ಬ್ಲಾಕ್ ಮೇಲ್ ಮಾಡಿ ಸಾಗರ ಕ್ಷೇತ್ರದಲ್ಲಿ ಹಾಲಪ್ಪ ಟಿಕೆಟ್ ಪಡೆದಿದ್ದಾರೆ. ಯಡಿಯೂರಪ್ಪ ಶೋಭಾ ಕರಂದ್ಲಾಜೆ ಕೇರಳ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ ಎಂದು ಈ ಹಿಂದೆ ಕೆಜೆಪಿ ಸಂಸ್ಥಾಪಕರೇ ಹೇಳಿದ್ದರು ಮತ್ತೊಮ್ಮೆ ಬೇಳೂರು ಪುನರುಚ್ಚರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos