ಬೆಂಗಳೂರು, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಪರಿಣಾಮ ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡಿದೆ. ಆದ್ರೆ ಪ್ರತಿ ಬಾರಿ ಈ ಸಮಸ್ಯೆ ಮಳೆಗಾಲದಲ್ಲಿ ಕಂಡು ಬರ್ತಿತ್ತು. ಆದ್ರೀಗ ಬೇಸಿಗೆಯಲ್ಲೇ ನೊರೆ ಸಮಸ್ಯೆ ಎದುರಾಗಿರೋದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಳ್ಳಂದೂರು ಕೆರೆಯ ನೊರೆ ತೀವ್ರ ಘಾಟು ಹೊಂದಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಶುರುವಾಗಿದೆ. ಸರಿ ಸುಮಾರು 900 ಎಕರೆ ಇರುವ ಬೆಳ್ಳಂದೂರು ಕೆರೆಗೆ ರಾಜಧಾನಿಯ 40 ಕಡೆಗಳಿಂದ ತ್ಯಾಜ್ಯ ಹರಿದು ಬರ್ತಿದೆ. ಇದ್ರಿಂದಾಗಿ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ತಿದೆ. ಅಲ್ಲದೆ ಇತ್ತೀಚೆಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವುದನ್ನು ತಡೆಹಿಡಿಯಲಾಗಿದೆ. ಹೀಗಾಗಿ ಕೆರೆಯ ಒಳ ಹರಿವು ಹೆಚ್ಚಾಗಿದ್ದು, ನೊರೆ ಸಮಸ್ಯೆ ಹೆಚ್ಚಾಗಿದೆ. ಈ ಸಂಬಂಧ ಬಿಡಿಎ, ಬಿಬಿಎಂಪಿ ಮತ್ತು ಜಲಮಂಡಳಿ ಕೂಡಲೇ ಎಚ್ಚೆತ್ತು ಕೆರೆ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.