ಬೆಂಗಳೂರು, ಜೂ. 19: ಒಂದು ಕೋಟಿಗೂ ಹೆಚ್ಚಿನ ಜನರಿರುವ ಬಿಡಿಎ ಮುಂದೆ ಸ್ವಾಭಾವಿಕವಾಗಿಯೇ ಸಾಕಷ್ಟು ಸವಾಲುಗಳಿರುತ್ತವೆ. ಜವಾಬ್ದಾರಿಯಿಂದ ಕೆಲಸ ಮಾಡಿ, ನಾಗರಿಕರಿಗೆ ಸೇವೆಗಳನ್ನ ಸುಲಭವಾಗಿ ತಲುಪಿಸಲು ಪ್ರಯತ್ನಿಸುತ್ತೇನೆ ಎಂದು ಬಿಡಿಎ ನೂತನ ಆಯುಕ್ತೆ ಡಾ. ಎನ್.ಮಂಜುಳ ಭರವಸೆ ನೀಡಿದ್ದಾರೆ.
ರಾಕೇಶ್ ಸಿಂಗ್ ಅವರ ವರ್ಗಾವಣೆ ಬಳಿಕ ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಮಂಜುಳ, ಕಾಲೇಜುಗಳಿಗೆ ಅಲೆದಾಡದೆ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಅಡ್ಮಿಷನ್ ಪಡೆಯಲು ಅಪ್ಲೈ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿದ ಹಾಗೆ ಬಿಡಿಎಯಲ್ಲೂ ಜನರಿಗೆ ಸುಲಭವಾಗಿ ಸೇವೆ ನೀಡುವ ಹಾಗೆ ಡಿಜಿಟಲೀಕರಣ ಮಾಡಲು ಕ್ರಮ ಕೈಗೊಳ್ಳೋದಾಗಿ ಅವರು ತಿಳಿಸಿದರು.
ಅಲ್ಲದೆ ನಗರಾಭಿವೃದ್ಧಿ ವಿಚಾರ ನನಗೆ ಹೊಸದೇನಲ್ಲ. ನಾನು ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿರುವುದರಿಂದ ಇಲ್ಲಿ ಉತ್ತಮ ಕೆಲಸ ಮಾಡುತ್ತೇನೆಂದರು. ಬಿಡಿಎ ಹಿಂದಿನ ಆಯುಕ್ತರ ಜೊತೆ ಚರ್ಚೆ ನಡೆಸುತ್ತೇನೆ. ಆದಾಯ ಕ್ರೋಢೀಕರಣದ ಬಗ್ಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯುವ ಬಗ್ಗೆಯೂ ಚರ್ಚಿಸಿಸುತ್ತೇನೆ. ಬಿಡಿಎಯನ್ನ ಸಬಲಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಅರ್ಕಾವತಿ, ಕೆಂಪೇಗೌಡ ಬಡಾವಣೆಗಳ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಂಡು ಕ್ರಮಗಳ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.