ಮಂಗಳೂರು, ಆ.06 : ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಉಳ್ಳಾಲ ಜಂಕ್ಷನ್ನಿನಲ್ಲಿ ಕೃತಕ ನೆರೆಯಾಯಿತು. ಅಂಗಡಿಗಳೊಳಗೂ ತ್ಯಾಜ್ಯ ನೀರು, ಮಳೆ ನೀರು ಹರಿಯಿತು. ಜನವಸತಿ ಪ್ರದೇಶಕ್ಕೆ ನೀರು ಹರಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳದ ಸ್ಥಳೀಯಾಡಳಿತ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಪ್ಯಾರೀಸ್ ಜಂಕ್ಷನ್ ಮತ್ತು ಹಿಂದೂ ರುದ್ರಭೂಮಿ ಸಮೀಪವಿರುವ ಚರಂಡಿ ಮೊಗವೀರಪಟ್ನ ನಿವಾಸಿಗಳು ಕಲ್ಲು ಕಟ್ಟುವ ಮೂಲಕ ಮುಚ್ಚಿದ್ದಾರೆ.
ಅಂಗಡಿ, ವಸತಿ, ವಾಣಿಜ್ಯ ಸಂಕೀರ್ಣ ಉಳ್ಳಾಲ ಜಂಕ್ಷನ್ನಿನ ತ್ಯಾಜ್ಯ ನೀರು ಮೊಗವೀರಪಟ್ನ ಆಗಿ ಹರಿದುಹೋಗುತ್ತಿದೆ. ಮೊಗವೀರಪಟ್ನ ನಿವಾಸಿಗಳು ಸ್ಥಳೀಯ ನಗರಸಭೆ ಆಡಳಿತಕ್ಕೆ ದೂರುಗಳನ್ನು ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ಶಾಸಕರಿಗೂ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೊಗವೀರಪಟ್ನ ತಗ್ಗುಪ್ರದೇಶ ಆಗಿರುವುದರಿಂದ ನೀರು ನಿಲ್ಲಿಸಲು ಅಸಾಧ್ಯ. ಯುಜಿಡಿ ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ ಪರಿಹಾರ ಕಂಡುಕೊಳ್ಳುವ ವಿಶ್ವಾಸ ನೀಡಿದ್ದರು.ದುರ್ನಾತ ಬೀರುವುದರ ಜತೆಗೆ ಸೊಳ್ಳೆ ಕಾಟವೂ ವಿಪರೀತ ಆಗಿದೆ ಅನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿತ್ತು.