ಬೀದರ್, ಡಿ. 25: ಹಳೆ ದ್ವೇಶದ ಹಿನ್ನೆಲೆಯಲ್ಲಿ ನಾಲ್ವರು ಚಾಕುವಿನಿಂದ ಇರಿದು ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಉಸ್ಮಾನ್ ಗಂಜ್ನಲ್ಲಿ ತಡರಾತ್ರಿ ನಡೆದಿದೆ.
ಮಹಮ್ಮದ್ ಅಕ್ಬರ್ ಕೊಲೆಯಾದ ದುರ್ದೈವಿ. ಮೈಲೂರಿನ ನಾಲ್ವರು ಮುಸ್ಲಿಂ ಯುವಕರು ಕುಡಿದ ಮತ್ತಿನಲ್ಲಿ ಮೃತ ಮಹಮ್ಮದ್ ಜೊತೆ ಮಾತಿಗೆ ಮಾತು ಬೆಳೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಚಾಕುವಿನಿಂದ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ನಗರ ಠಾಣೆಯ ಪೊಲೀಸರು ಶೋಧಕಾರ್ಯ ಶುರು ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತ ದೇಹವನ್ನು ರವಾನಿಸಲಾಗಿದ್ದು, ಜಿಲ್ಲಾಸ್ಪತ್ರೆಯ ಶವಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.