ಬೆಂಗಳೂರು, ಮೇ.22, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಮನಸ್ಸುಗಳಲ್ಲಿ ಮನೆಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅವರು, ಸಿನಿಮಾ ಮಾಡುವುದರ ಜೊತೆಗೆ ಇತ್ತಿಚಿಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಹೌದು, ‘ಯಶೋಗಾಥೆ’ ಎನ್ ಜಿಒ ಮೂಲಕ ಸಾಕಷ್ಟು ಕೆರೆಗಳು ಮರುಜೀವ ಪಡೆದುಕೊಂಡಿವೆ.
ಅನೇಕ ಕೆರೆಗಳ ಹೂಳು ತೆಗೆಯುವ ಕಾರ್ಯಕ್ಕೆ ಯಶ್ ಕೈ ಜೋಡಿಸಿದ್ದರು. ಜಲ ರಕ್ಷಣೆಯ ಬಗ್ಗೆ ಅವರು ತೋರುವ ಕಾಳಜಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಸದ್ಯ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಅದರ ವಿರುದ್ಧ ಹೋರಾಡಲು ಯಶ್ ಮುಂದಾಗಿದ್ದಾರೆ.
ಹೌದು, ರಾಯಚೂರಿನಲ್ಲಿ ಭೀಕರ ಬರ ಎದುರಾಗಿದೆ. ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಇದನ್ನು ಮನಗಂಡ ರಾಕಿಂಗ್ ಸ್ಟಾರ್ ಯಶ್ ಅವರು ‘ಯಶೋಮಾರ್ಗ’ ಮೂಲಕ ರಾಯಚೂರಿನ ಕೆಲ ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ.
ಟ್ಯಾಂಕರ್ ಮೂಲಕ ಕೆಲ ಮನೆಗಳಿಗೆ ನೀರು ಪೂರೈಕೆ ಕಾರ್ಯ ನಡೆದಿದೆ. ಯಶ್ ಅವರ ಕಾರ್ಯಕ್ಕೆ ಅಲ್ಲಿನ ಜನತೆ ಸಂತಸಗೊಂಡಿದೆ.
ಪ್ರತಿ ದಿನ ನೀರಿನ ಸಮಸ್ಯೆ ಎದುರಿಸುತ್ತಿರುವ ಬೀದರ್ ಹಾಗೂ ರಾಯಚೂರಿನ 3,4 ಹಳ್ಳಿಗಳಿಗೆ ಕಳೆದ 1 ವಾರದಿಂದ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ.
ಕುಡಿಯಲೂ ನೀರಿಲ್ಲದೆ ಪರದಾಡುತ್ತಿದ್ದ ಹಳ್ಳಿಗರು ಯಶ್ ಕಾರ್ಯಕ್ಕೆ ಸಂತಸಗೊಂಡಿದ್ದು, ಬೇಸಿಗೆಯ ಬಿರುಸನ್ನು ಕಡಿಮೆ ಮಾಡಿಕೊಂಡಿದ್ದಾರೆ.