ಶಿವಮೊಗ್ಗ, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಶಿವಮೊಗ್ಗದ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಸಿನಿಮಾ ನಟನಿಗೆ ವಂಚಿಸಿದ ಆರೋಪ ಕೇಳಿಬಂದಿದ್ದು, ನೊಂದ ನಟ ತಾಯಿಯೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ್ದಾರೆ.
2016 ರಲ್ಲಿ ದಿನಸಿ ಅಂಗಡಿ ಅಭಿವೃದ್ದಿಗಾಗಿ ಶಿವಮೊಗ್ಗದ ತುಂಗಾ ನಗರದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಸಂತೋಷ್, 2 ಮನೆಗಳನ್ನು ಅಡವಿಟ್ಟಿದ್ದಾರೆ.
ನಟನ ಖಾತೆಗೆ ಸಾಲದ ಮೊತ್ತ 12 ಲಕ್ಷ ರೂ. ಹಾಕಬೇಕಾದ ಮ್ಯಾನೇಜರ್, ಬೇರೆ ನಕಲಿ ಖಾತೆಗಳಿಗೆ ವರ್ಗಾಯಿಸಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಬ್ಯಾಂಕ್ ನಿಂದ ನಟನಿಗೆ ಸಾಲದ ಕಂತು ಕಟ್ಟುವಂತೆ ಪ್ರತಿ ತಿಂಗಳು ಒತ್ತಡ ಹಾಕಲಾಗಿದೆ.
ಬ್ಯಾಂಕ್ ನಿಂದ ಬಿಡಿಗಾಸು ಹಣ ಪಡೆಯದೆ ಸಾಲ ಹೇಗೆ ತೀರಿಸಲಿ ಎಂದು ಸಂತೋಷ್ ಗ್ರಾಹಕರ ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಬ್ಯಾಂಕ್ ನ ಲೋಪ ಎತ್ತಿ ಹಿಡಿದ ಗ್ರಾಹಕರ ವೇದಿಕೆ ನ್ಯಾಯಾಲಯ, ನಟನಿಗೆ ಸಾಲದ ಮೊತ್ತ,ಬಡ್ಡಿ ಸೇರಿ ಏ. 18 ರ ಒಳಗೆ ಹಣ ಪಾವತಿಸುವಂತೆ ಆದೇಶಿಸಿದೆ.
ನ್ಯಾಯಾಲಯದ ಆದೇಶಕ್ಕೆ ಕ್ಯಾರೆ ಎನ್ನದ ಸಿಂಡಿಕೇಟ್ ಬ್ಯಾಂಕ್ ನವರು ಹೈಕೋರ್ಟ್ ಮೆಟ್ಟಲೇರಲು ಸಿದ್ದತೆ ನಡೆಸಿದೆ ಎನ್ನಲಾಗಿದ್ದು, ನೊಂದ ಸಂತೋಷ್ ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ್ದಾರೆ.