ಬೆಂಗಳೂರು, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಈಸ್ಟರ್ ಸಂಡೇ ಹಬ್ಬದ ಮೂಡ್ನಲ್ಲಿದ್ದ ಶ್ರೀಲಂಕಾದಲ್ಲಿ ಸರಣಿ ಬಾಂಬ್ಗಳು ಸ್ಫೋಟಿಸಿ 350ಕ್ಕೂ ಹೆಚ್ಚು ಜನರ ಸಾವಿಗೆ, 500ಕ್ಕೂ ಹೆಚ್ಚು ಜನರು ಗಾಯಗೊಳ್ಳಲು ಕಾರಣವಾದವು. ಇದರ ಬೆನ್ನಲ್ಲೇ ರಾಜ್ಯ ಕೂಡ ಹೈ ಅಲರ್ಟ್ ಮೋಡ್ಗೆ ಹೋಗಿದೆ. ಅದ್ರಲ್ಲೂ ಬೆಂಗಳೂರು ಸಿಟಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸಿಟಿ ಪೊಲೀಸರಿಗೆ ಹೈ ಅಲರ್ಟ್ ಆಗಿರಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ. ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಪೋಲಿಸ್ರು ಈ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಸಂಬಂಧ ನಗರದ ಎಲ್ಲ ಸ್ಟಾರ್ ಹೋಟೆಲ್, ಮಾಲ್, ಚರ್ಚ್, ದೇವಸ್ಥಾನ, ಮಸೀದಿಗಳ ಮುಖ್ಯಸ್ಥರ ಸಭೆ ಕರೆಯಲಾಗಿದೆ. ನಗರ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸಭೆ ನಡೆಯಲಿದೆ. ಈ ವೇಳೆ ಭದ್ರತೆ ಕುರಿತು ಖಡಕ್ ಎಚ್ಚರಿಕೆ ನೀಡಲು ಪೊಲೀಸರು ತೀರ್ಮಾನಿಸಿದ್ದಾರೆ.