ಚಾಮರಾಜನಗರ: ಕಳೆದ 3 ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ಪ್ರಾಣಿ ಸಂಕುಲ ನಲುಗಿಹೋಗಿದೆ. ಬೆಂಕಿಯಲ್ಲಿ ಕಾಡುಪ್ರಾಣಿಗಳು ಅಕ್ಷರಶಃ ಬೆಂದು ಕರುಕಲಾಗಿ ಹೋಗಿವೆ.
ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟ ವಲಯದ ಕೆಬ್ಬೇಪುರ-ಚೌಡಹಳ್ಳಿ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡು ಬಂದ ಬೆಂಕಿ ಸುತ್ತಮುತ್ತಲ ಪ್ರದೇಶಗಳಿಗೆ ವ್ಯಾಪಿಸಿದೆ. ನಾಗರಹೊಳೆ ಉದ್ಯಾನದ ಸೊಳ್ಳೇಪುರ ಬಳಿ ಕಾಡ್ಗಿಚ್ಚಿಗೆ 35 ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ.
ಅರಣ್ಯದ ಪ್ರಾಣಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ದೃಶ್ಯಗಳು ಮನಕಲಕುವಂತಿವೆ. ಜಿಂಕೆ, ಮೊಲ, ಚಿಂಪಾಂಜಿ, ಹಾವುಗಳು ಹಾಗೂ ಇನ್ನಿತರೆ ವಿವಿಧ ಪ್ರಾಣಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿವೆ. ಒಂದು ಮೊಲ ಓಡುತ್ತಿರುವ ಸ್ಥಿತಿಯಲ್ಲೇ ಸುಟ್ಟು ಕಲ್ಲಿನಂತಾಗಿರುವುದನ್ನ ನೋಡಿದರೆ ಕರುಳು ಹಿಂಡಿದಂತಾಗುತ್ತೆ. ಸುಟ್ಟು ಕರಕಲಾದ ಜಿಂಕೆಗಳ ದೇಹಗಳು ರಾಶಿ ಬಿದ್ದಿವೆ. ಹಾವುಗಳು ಇದ್ದ ಸ್ಥಿತಿಯಲ್ಲೇ ಬೂದಿಯಾಗಿವೆ.