ಒಕ್ಕಲಿಗ-ಬಲಿಜ ಸಮುದಾಯ ಒಡೆಯುವ ಯತ್ನ: ಕವಿತಾ ಕೃಷ್ಣ

ಒಕ್ಕಲಿಗ-ಬಲಿಜ ಸಮುದಾಯ ಒಡೆಯುವ ಯತ್ನ: ಕವಿತಾ ಕೃಷ್ಣ

ತುಮಕೂರು, . 13, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದ ಹಾಲಿ ಸಂಸದರಾದ ಶಿವರಾಮೇಗೌಡ ಅವರು ಇತ್ತೀಚಿಗೆ ಚುನಾವಣಾ ಪ್ರಚಾರದ ವೇಳೆ ಬಲಿಜ ಸಮಾಜದ ಮುಖಂಡರು ಹಾಗೂ ಚಲನಚಿತ್ರ ನಟರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಬಲಿಜ ಸಮಾಜದ ಮುಖಂಡರಾದ ಕವಿತಾ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. ಬಲಿಜ ಸಮಾಜದಲ್ಲಿ ಅನೇಕ ಮುಖಂಡರು, ಸಮಾಜದ ಸೇವಕರು ಸೇರಿದಂತೆ ಇತಿಹಾಸ ಸೃಷ್ಟಿಸಿದ ಅನೇಕ ನಾಯಕರು, ದಾರ್ಶನಿಕರು ಇದ್ದಾರೆ. ಪ್ರಸ್ತುತವಾಗಿ ಚಲನಚಿತ್ರ ರಂಗದ ನಟರ ಬಗ್ಗೆ ಹಾಲಿ ಸಂಸದ ಶಿವರಾಮೇಗೌಡರು ಜಾತಿ ನಿಂದನೆ ಮಾಡಿ, ಮಾತನಾಡಿರುವುದು ಖಂಡಿನೀಯ. ಚುನಾವಣಾ ಪ್ರಚಾರದಲ್ಲಿ ಜಾತ್ಯತೀತ ಎಂಬ ಹೆಸರನ್ನು ಇಟ್ಟುಕೊಂಡಿರುವ ಜನತಾದಳದ ಸಂಸದರಾದ ಶಿವರಾಮೇಗೌಡ ಒಕ್ಕಲಿಗ ಮತ್ತು ಬಲಿಜ ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದೇ ಪಕ್ಷದವರಾದ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಲಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರಾಗಲಿ ಈ ವಿಷಯದ ಬಗ್ಗೆ ಚಕಾರ ಎತ್ತದೆ, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸುಮಲತಾ, ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಕೂಡ ಬಲಿಜ ಸಮಾಜದವರು. ಇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಇದು ಬಲಿಜ ಜನಾಂಗಕ್ಕೆ ಮಾಡಿದಂತಹ ಅವಮಾನವಾಗಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ದರ್ಶನ್ ಮತ್ತು ಯಶ್ ಅವರನ್ನು ಕಳ್ಳೆತ್ತು ಎಂದು ಸಂಬೋಧಿಸಿದ್ದಾರೆ. ಹೆಚ್.ಡಿ ರೇವಣ್ಣ ಸುಮಲತಾ ಅವರನ್ನು ವಿಧವೆ ಎಂದು ಸಂಬೋಧಿಸಿರುವುದು ಖಂಡನೀಯ. ಈ ಕೂಡಲೇ ಸುಮಲತಾ, ದರ್ಶನ್, ರಾಕ್ ಲೈನ್ ವೆಂಕಟೇಶ್ ಅವರ ಹತ್ತಿರ ಕ್ಷಮೆ ಯಾಚಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಹೆಬ್ಬೂರು ರಂಗಯ್ಯ, ಶಿವರಾಮೇಗೌಡರು ಈ ಮುಂಚೆ ಯಾವ ಸ್ಥಿತಿಯಲ್ಲಿ ಇದ್ದರು, ಈಗ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಅರಿತು ಮಾತನಾಡಬೇಕುಎಂದರು. ನಂತರ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ ಸಮಾಜದ ಮುಖಂಡರು ಶಿವರಾಮೇಗೌಡರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಫ್ರೆಶ್ ನ್ಯೂಸ್

Latest Posts

Featured Videos